ಹಾವೇರಿ: ಅತ್ತ ಹೊಸ ಸರ್ಕಾರ ರಚಿಸೋಕೆ ಬಿಜೆಪಿ ಕಸರತ್ತು ನಡೆಸುತ್ತಿದೆ, ಇತ್ತ ಇರೋ ಸರ್ಕಾರ ಉಳಿಸಿಕೊಳ್ಳೋಕೆ ದೋಸ್ತಿಗಳು ಒದ್ದಾಡುತ್ತಿದ್ದಾರೆ. ಹೀಗೆ ಎಲ್ಲರೂ ಅಧಿಕಾರದ ಯುದ್ಧದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಜನರ ಸಮಸ್ಯೆಯನ್ನು ಕೇಳುವವರೇ ಇಲ್ಲವಾಗಿದ್ದಾರೆ.
ಹೌದು, ರಾಜಕೀಯ ಹೈಡ್ರಾಮದಲ್ಲಿ ಮುಳುಗಿರುವ ರಾಜಕಾರಣಿಗಳಿಗೆ ಜನರ ಸಮಸ್ಯೆಗೆ ಪರಿಹಾರ ನೀಡಲು ಆಗುತ್ತಿಲ್ಲ. ಬಿಜೆಪಿ ಶಾಸಕ ಬಸವರಾಜ್ ಬೊಮ್ಮಾಯಿಯವರ ಕ್ಷೇತ್ರ ಅದಕ್ಕೆ ಸಾಕ್ಷಿಯಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭೆ ವ್ಯಾಪ್ತಿಯಲ್ಲಿ ಬರೋ ಸವಣೂರು ತಾಲೂಕಿನ ಕಳಸೂರು ಗ್ರಾಮದ ಸೇತುವೆ ಮಳೆಗೆ ಮುಳುಗಡೆಯಾಗಿದೆ. ವರದಾ ನದಿಯಲ್ಲಿ ಮಳೆಗಾಲದಲ್ಲಿ ನೀರು ಹೆಚ್ಚಾಗಿ ಐದಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಮುಳುಗಿ ಹೋಗುತ್ತೆ.
ಸೇತುವೆ ಎತ್ತರಿಸುವಂತೆ ಹಲವಾರು ವರ್ಷಗಳಿಂದ ಸ್ಥಳೀಯರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನರಿಂದ ಆರಿಸಿ ಜನರಿಗಾಗಿ ಕೆಲಸ ಮಾಡಬೇಕಾದವರು ಕ್ಯಾರೆ ಅನ್ನುತ್ತಿಲ್ಲ. ಇದರಿಂದಾಗಿ ಕೃಷಿಕರು ಸಂಕಷ್ಟ ಅನುಭವಿಸುತ್ತಿದ್ದು, 40 ಕಿಲೋಮೀಟರ್ ಸುತ್ತಿ ಬಳಸಿ ಜಮೀನಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಅಷ್ಟೇ ಅಲ್ಲದೆ ಈ ನೀರಿನ ನಡುವೆಯೇ ಸೇತುಗೆ ದಾಟಲು ಹೋಗಿ ಈ ಹಿಂದೆ ಅದೆಷ್ಟೋ ಜನ ಜೀವ ಕೂಡ ಬಿಟ್ಟಿದ್ದಾರೆ.