ಚಿಕ್ಕಬಳ್ಳಾಪುರ: ನೀರಾವರಿ ವಿಚಾರದಲ್ಲಿ ನನಗೆ ಅನ್ಯಾಯವಾಗಿದೆ. ಹೀಗಾಗಿ ಸಮ್ಮಿಶ್ರ ಸರ್ಕಾರದ ವಿರುದ್ಧ ನನಗೆ ಮನಸ್ತಾಪ ಇರುವುದು ನಿಜ. ಆದರೆ ಸರ್ಕಾರವೇ ಸಂಕಷ್ಟದಲ್ಲಿ ಇರುವಾಗ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬಾಗೇಪಲ್ಲಿ ಪಟ್ಟಣದ ತಮ್ಮ ನಿವಾಸದಲ್ಲಿ ಬೆಂಬಲಿಗರ ಜೊತೆ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 13 ಮಂದಿ ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ನಾನು ಕೂಡ ರಾಜೀನಾಮೆ ನೀಡುತ್ತೇನೆ ಎಂದು ಕೆಲ ಮಾಧ್ಯಮದವರು ತೋರಿಸಿದ್ದಾರೆ. ಇದರಿಂದ ಕ್ಷೇತ್ರದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ ಎಂದು ಹೇಳಿದರು.
ಅಂದಹಾಗೆ ಚೇಳೂರು ಗ್ರಾಮದಲ್ಲಿನ ಜನಸ್ಪಂದನ ಕಾರ್ಯಕ್ರಮದಲ್ಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದು ನಿಜ. ನನ್ನ ಬಾಗೇಪಲ್ಲಿ ಕ್ಷೇತ್ರಕ್ಕೆ ಎಚ್.ಎನ್ ವ್ಯಾಲಿ ನೀರು ಬರದಿದ್ದರೆ ಮುಂದಿನ ಕ್ಯಾಬಿನೆಟ್ನಲ್ಲಿ ಕೇಳಿ ಅನಂತರ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಅಷ್ಟರಲ್ಲಿ 13 ಮಂದಿ ಶಾಸಕರ ರಾಜೀನಾಮೆಯಿಂದ ಸರ್ಕಾರ ಪತನವಾಗುವ ಲಕ್ಷಣಗಳು ಕಂಡು ಬಂದವು ಎಂದು ತಿಳಿಸಿದರು.
ಅವರ ರಾಜೀನಾಮೆಗೂ ನನ್ನ ರಾಜೀನಾಮೆಗೂ ಯಾವುದೇ ಸಂಬಂಧವಿಲ್ಲ. ಅವರು ವೈಯುಕ್ತಿಕ ಸೇರಿದಂತೆ ಅನುದಾನ ಕೊರತೆ, ಅಧಿಕಾರಿಗಳ ವರ್ಗಾವಣೆ ಸೇರಿ ಅನೇಕ ಕಾರಣಗಳಿಗೆ ರಾಜೀನಾಮೆ ಕೊಟ್ಟಿರಬಹುದು. ಆದರೆ ನಾನು ಜನರಿಗೆ ಸಂಕಷ್ಟ ಬಂದಾಗ ಕಷ್ಟ ಪರಿಹರಿಸಲು ರಾಜೀನಾಮೆ ನೀಡುವೆ ಹೊರತು ಈ ಸಂದರ್ಭದಲ್ಲಿ ರಾಜೀನಾಮೆ ನೀಡುವುದಿಲ್ಲ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಹೇಳಿದರು.
ಈಗಲೂ ಕಾಯುತ್ತೇನೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಬಾಗೇಪಲ್ಲಿ ಕ್ಷೇತ್ರಕ್ಕೆ ಎಚ್.ಎನ್ ವ್ಯಾಲಿ ಹಾಗೂ ಎತ್ತಿನಹೊಳೆ ನೀರು ಬರಲಿಲ್ಲ ಅಂದರೆ ನನಗೆ ಮತ ಹಾಕಿದ ಜನರ ಸಮೇತ ವಿಧಾನಸೌಧಕ್ಕೆ ಪಾದಯಾತ್ರೆ ಮೂಲಕ ತೆರಳಿ ಜನರ ಮುಂದೆಯೇ ನನ್ನ ರಾಜೀನಾಮೆ ಪತ್ರ ನಿಡೋದಾಗಿ ತಿಳಿಸಿದರು.