ಬೆಂಗಳೂರು: ತನ್ನ ತಾಯಿಯ ಹಲ್ಲು ವಾಸನೆ ಬರುತ್ತಿದೆ ಎಂದು ಮಕ್ಕಳು ಮನೆಯಿಂದ ಹೊರಹಾಕಿದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಶೀಲ(47) ಅವರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಕ್ಕಳಿದ್ದಾರೆ. ಇಬ್ಬರು ಮಕ್ಕಳು ಉನ್ನತ ಹುದ್ದೆಯಲ್ಲಿ ಕೆಲಸ ಕೂಡ ನಿರ್ವಹಿಸ್ತಿದ್ದಾರೆ. ಆದರೆ ತಾಯಿಗೆ ಹಲ್ಲು ನೋವಿದ್ದ ಕಾರಣ ಖಾಸಗಿ ಆಸ್ಪತ್ರೆ ಹೋಗಿ ಸಮಸ್ಯೆ ತೋರಿಸಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದ ಅವರ ಹಲ್ಲಿನ ಎಲುಬು ಕಟ್ ಮಾಡಿದ್ದಾರೆ. ಇದರಿಂದ ಅವರ ಬಾಯಿ ವಾಸನೆ ಬಂದಿದೆ. ಹಾಗಾಗಿ ಮಕ್ಕಳು ತಾಯಿಯನ್ನು ಹೊರ ಹಾಕಿದ್ದಾರೆ.
ಶೀಲ ಅವರು ದೇವಸ್ಥಾನ ಕೆಲಸ ಮಾಡುತ್ತಾ 50 ರೂಪಾಯಿಯಲ್ಲಿ ತನ್ನ ಪ್ರತಿ ದಿನದ ಜೀವನ ಸಾಗಿಸುತ್ತಿದ್ದಾರೆ. ಆದರೆ ತನ್ನ ಹಲ್ಲಿನ ಖರ್ಚಿಗಾಗಿ ಮಕ್ಕಳ ಮೊರೆ ಹೋದರೆ ಹೆತ್ತ ತಾಯಿಗೆ ಸಹಾಯ ಮಾಡುವಷ್ಟು ಬುದ್ಧಿ ಅವರಿಗೆ ಬಂದಿಲ್ಲ. ಇದರಿಂದ ನೊಂದ ತಾಯಿ ವನಿತಾ ಸಹಾಯವಾಣಿ ಮೆಟ್ಟಿಲೇರಿದ್ದಾರೆ.
ಮಕ್ಕಳಿಗೆ ವನಿತಾ ಸಹಾಯವಾಣಿ ಕರೆದು ತಿಳಿ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ವನಿತ ಸಹಾಯವಾಣಿ ಅವರು ಶೀಲ ಅವರನ್ನು ಮೊದಲು ವಾಣಿ ವಿಲಾಸ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆಸ್ಪತ್ರೆಯವರು ಶೀಲ ಅವರಿಗೆ ಚಿಕಿತ್ಸೆ ಕೊಡಲು ಸಿದ್ಧವಿದ್ದು, ಅವರ ಜೊತೆ ಆರೈಕೆಗೆ ಒಬ್ಬರು ಇರಬೇಕು ಎಂದಿದ್ದಾರೆ.
ಮಕ್ಕಳು ತಾಯಿಯ ಬಳಿ ಬಾರದೇ ದೂರ ಇಟ್ಟಿದ್ದಾರೆ. ಮತ್ತೊಂದೆಡೆ ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸಿದ್ರು ಅಲ್ಲಿ ಕೂಡ ಅವರಿಗೆ ನೆಲೆ ಸಿಕ್ಕಿಲ್ಲ. ಇದೀಗ ವನಿತಾ ಸಹಾಯವಾಣಿಯ ಕೌನ್ಸಿಲರ್ ಡಾ. ಬಿಂದ್ಯ ಅವರೇ ಇದಕ್ಕೆ ಪರಿಹಾರ ನೀಡಲು ಹೊರಟಿದ್ದಾರೆ.