ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಕಾಂಗ್ರೆಸ್ ನಾಯಕತ್ವ (Karnataka Power Tussle) ಹಾಗೂ ‘ಪವರ್ ಶೇರಿಂಗ್’ ಪಾಲಿಟಿಕ್ಸ್ ಅಂತಿಮ ಘಟ್ಟಕ್ಕೆ ತಲುಪಿದಂತೆ ಕಾಣುತ್ತಿದೆ. ಹೈಕಮಾಂಡ್ ದೆಹಲಿಗೆ ಬರುವಂತೆ ತುರ್ತು ಬುಲಾವ್ ನೀಡಿದ ಬೆನ್ನಲ್ಲೇ ಸಿಎಂ ಮಾಸ್ಟರ್ ಪ್ಲಾನ್ ಮಾಡಿದ್ದು, ತಮ್ಮ ಆಪ್ತ ಸಚಿವರ ದಂಡಿನೊಂದಿಗೆ ಇಂದು ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಕುರ್ಚಿ ಕಿತ್ತಾಟ ತಾರಕಕ್ಕೇರಿರುವ ಈ ಸಂದರ್ಭದಲ್ಲಿ ಹೈಕಮಾಂಡ್ ಕೇವಲ ಸಿದ್ದರಾಮಯ್ಯ (CM Siddaramaiah) ಅವರನ್ನು ಮಾತ್ರ ದೆಹಲಿಗೆ ಆಹ್ವಾನಿಸಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಅವರು ಸದ್ದಿಲ್ಲದೆ ತಮ್ಮ ಆಪ್ತ ಸಚಿವರಿಗೆ ದೆಹಲಿಗೆ ಬರುವಂತೆ ಕರೆ ನೀಡಿದ್ದಾರೆ.
ಸಿಎಂ ಕರೆಯ ಬೆನ್ನಲ್ಲೇ ಗೃಹ ಸಚಿವ ಜಿ. ಪರಮೇಶ್ವರ್ (Parameshwar) ಹಾಗೂ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ (MB Patil) ಸೇರಿದಂತೆ ಪ್ರಮುಖ ನಾಯಕರು ಸಿಎಂ ಜೊತೆ ದೆಹಲಿಗೆ (Delhi) ತೆರಳುತ್ತಿದ್ದಾರೆ. ಹೈಕಮಾಂಡ್ ಮುಂದೆ ತಮ್ಮ ಸಂಖ್ಯಾಬಲ ಹಾಗೂ ನಾಯಕರ ಬೆಂಬಲವನ್ನು ಪರೋಕ್ಷವಾಗಿ ಪ್ರದರ್ಶಿಸಲು ಸಿದ್ದರಾಮಯ್ಯ ಈ ತಂತ್ರಗಾರಿಕೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.
ಮಂಗಳವಾರ ಸಭೆ:
ಇಂದು ರಾತ್ರಿ ಸಿದ್ದರಾಮಯ್ಯ ದೆಹಲಿ ತಲುಪಲಿದ್ದು ನಾಳೆ(ಮೇ 26) ಬೆಳಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ರಾಹುಲ್ ಗಾಂಧಿ (Rahul Gandhi) ಸಮ್ಮುಖದಲ್ಲಿ ಹೈವೋಲ್ಟೇಜ್ ಸಭೆ ನಡೆಯಲಿದೆ.
ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ರಾಹುಲ್ ಗಾಂಧಿ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ. ಆ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿ ಮಾತನಾಡುವ ಸಾಧ್ಯತೆ ಹೆಚ್ಚಿದೆ. ಈ ಸಭೆ ಸಿದ್ದರಾಮಯ್ಯ ಪಾಲಿಗೆ ‘ಗುಡ್ ನ್ಯೂಸ್’ ತರುತ್ತಾ ಅಥವಾ ‘ಶಾಕ್’ ನೀಡುತ್ತಾ ಎಂಬುದು ನಾಳೆ ನಿರ್ಧಾರವಾಗಲಿದೆ. ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಭಾರೀ ವ್ಯತ್ಯಯ – ಪಬ್ಲಿಕ್ ಟಿವಿ ಪ್ರಶ್ನೆಗೆ ಮುನಿಯಪ್ಪ ತರಲೆ ಉತ್ತರ!
ಒಂದು ವೇಳೆ ಇದು ಆಗದೇ ಇದ್ದರೆ ಸದ್ಯಕ್ಕೆ ನಾಯಕತ್ವ ಬದಲಾವಣೆ ಬೇಡ, ಮುಂದೆ ಸಾಗಿ… ಸಂಪುಟ ಪುನರಚನೆ ಮಾಡಿಕೊಳ್ಳಿ ಎಂದು ರಾಹುಲ್ ಗಾಂಧಿ ನಾಯಕತ್ವ ವಿಚಾರಕ್ಕೆ ಕ್ಲಾರಿಟಿ ಕೊಡುವ ಸಾಧ್ಯತೆಯಿದೆ. ರಾಜ್ಯಸಭೆ ಚುನಾವಣೆ ಮುಗಿಯುವವರೆಗೆ ಸುಮ್ಮನಿರಿ, ಸಿಎಂ ಕುರ್ಚಿ ಬದಲಾವಣೆ ಬಗ್ಗೆ ಮುಂದೆ ನೋಡೋಣ ಎಂದು ಸದ್ಯದ ಮಟ್ಟಿಗೆ ಬಿಕ್ಕಟ್ಟು ಶಮನ ಮಾಡಲು ಹೈಕಮಾಂಡ್ ಮುಂದಾಗಬಹುದು ಎನ್ನಲಾಗುತ್ತಿದೆ. ಈ ಮೂರು ವಿಚಾರಗಳ ಪೈಕಿ ಒಂದು ವಿಚಾರಕ್ಕೆ ಈ ಬಾರಿ ಸ್ಪಷ್ಟನೆ ಸಿಗಲಿದೆ.
