ಮುಲ್ಲಾನ್ಪುರ: ಐಪಿಎಲ್ (IPL 2025) ಲೀಗ್ ಹಂತದ ಎಲ್ಲಾ ಪಂದ್ಯಗಳು ಕೊನೆಗೊಂಡಿದ್ದು ಇಂದು ಚಂಡೀಗಢದ ಮುಲ್ಲಾನ್ಪುರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ಮಧ್ಯೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಜಯಗಳಿಸಿದವರು ನೇರವಾಗಿ ಫೈನಲ್ ಪ್ರವೇಶಿಸಿದರೆ ಸೋತವರು ಭಾನುವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯವನ್ನು ಆಡಬೇಕಾಗುತ್ತದೆ.
ಆರ್ಸಿಬಿ ಈ ಬಾರಿ ಲೀಗ್ 14 ಪಂದ್ಯಗಳ ಪೈಕಿ 9 ರಲ್ಲಿ ಗೆದ್ದಿದೆ. ಮಳೆಯಿಂದ ಬೆಂಗಳೂರಿನ ಪಂದ್ಯ ರದ್ದಾಗಿದ್ದರಿಂದ ಒಟ್ಟು 19 ಅಂಕ ಸಂಪಾದಿಸಿ 2ನೇ ಸ್ಥಾನ ಪಡೆದಿದೆ. ಪಂಜಾಬ್ ಸಮಾನ 19 ಅಂಕ ಪಡೆದರೂ ನೆಟ್ ರನ್ರೇಟ್ ಆಧಾರದಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಬಾರಿ ಮೂರನೇ ಬಾರಿ ಇತ್ತಂಡಗಳು ಮುಖಾಮುಖಿಯಾಗುತ್ತಿವೆ. ಲೀಗ್ ಮುಖಾಮುಖಿಯಲ್ಲಿ ಎರಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದಿವೆ. ಇದನ್ನೂ ಓದಿ: IPL 2025 | ಪಂದ್ಯ ಸೋತು ಹೃದಯ ಗೆದ್ದ ಪಂತ್
ಆರ್ಸಿಬಿಗೆ ಗಾಯದ ಚಿಂತೆ:
ಐಪಿಎಲ್ ಪುನಾರಂಭದ ಬಳಿಕ ಆರ್ಸಿಬಿಯಲ್ಲಿ ಗಾಯದ ಸಮಸ್ಯೆ ಹೆಚ್ಚಾಗಿದೆ. ವೇಗಿ ಜೋಶ್ ಹೇಜಲ್ವುಡ್ ಫಿಟ್ ಆಗಿದ್ದು, ಈ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಟಿಮ್ ಡೇವಿಡ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಗೈರಾಗಲಿದ್ದಾರೆ ಎನ್ನಲಾಗುತ್ತಿದೆ. ನಾಯಕ ರಜತ್ ಪಾಟೀದಾರ್ ಗಾಯದ ಸಮಸ್ಯೆ ಜೊತೆಗೆ ಲಯದ ಸಮಸ್ಯೆ ಎದುರಿಸುತ್ತಿದ್ದಾರೆ.
ಕಳೆದ ಬಾರಿ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಕೋಲ್ಕತ್ತಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿಯೂ ಶ್ರೇಯಸ್ ಅಯ್ಯರ್ ತಂಡವನ್ನು ಪ್ಲೇ ಆಫ್ವರೆಗೆ ತಲುಪಿಸಿದ್ದಾರೆ. ತಂಡ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು ತವರಿನಲ್ಲಿ ಆರ್ಸಿಬಿಯನ್ನು ಮಣಿಸುವ ಲೆಕ್ಕಾಚಾರದಲ್ಲಿದೆ. ಇದನ್ನೂ ಓದಿ: ಆರ್ಸಿಬಿಯಲ್ಲಿರುವ ಅಣ್ಣ ಹುರಿದುಂಬಿಸಿದ್ರು, ನಾನು ನನ್ನ ಆಟವಾಡಿದೆ: ಜಿತೇಶ್ ಶರ್ಮಾ
ಈ ಬಾರಿಯ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ (Virat Kohli) ಒಟ್ಟು 602 ರನ್ ಹೊಡೆದು ಅತಿ ಹೆಚ್ಚು ರನ್ ಹೊಡೆದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದರೆ 514 ರನ್ ಹೊಡೆದಿರುವ ಶ್ರೇಯಸ್ ಅಯ್ಯರ್ (Shreyas Iyer) 10ನೇ ಸ್ಥಾನ ಪಡೆದಿದ್ದಾರೆ. 499 ರನ್ ಹೊಡೆದಿರುವ ಪ್ರಭುಸಿಮ್ರಾನ್ ಸಿಂಗ್ 11ನೇ ಸ್ಥಾನ ಪಡೆದಿದ್ದಾರೆ.
ಬೌಲಿಂಗ್ನಲ್ಲಿ 10 ಪಂದ್ಯಗಳಿಂದ 18 ವಿಕೆಟ್ ಪಡೆದ ಜೋಶ್ ಹೇಜಲ್ವುಡ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದರೆ ಪಂಜಾಬ್ ಕಿಂಗ್ಸ್ನ ಅರ್ಶ್ದೀಪ್ ಸಿಂಗ್ 14 ಪಂದ್ಯಗಳಿಂದ 18 ವಿಕೆಟ್ ಪಡೆದು 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: RCB ವಿರುದ್ಧದ ಪಂದ್ಯದಲ್ಲಿ ನಾನಾ ಅವತಾರ – ಪಂತ್ ಸೇರಿ ಎಲ್ಎಸ್ಜಿಗೆ ಬಿತ್ತು ಭಾರಿ ದಂಡ
ಟ್ರೋಫಿ ಸಿಕ್ಕಿಲ್ಲ
ಆರ್ಸಿಬಿ ಮತ್ತು ಪಂಜಾಬ್ ಇಲ್ಲಿಯವರೆಗೆ ಟ್ರೋಫಿಯನ್ನು ಗೆದ್ದಿಲ್ಲ. ಆದರೆ ಇಲ್ಲಿಯವರೆಗೆ ಎರಡೂ ತಂಡಗಳು ಫೈನಲ್ ಪ್ರವೇಶಿಸಿವೆ. ಆರ್ಸಿಬಿ 2009, 2011, 2016 ರಲ್ಲಿ ಫೈನಲ್ ಪ್ರವೇಶಿಸಿದರೆ ಪಂಜಾಬ್ 2014 ರಲ್ಲಿ ಫೈನಲ್ ಪ್ರವೇಶಿಸಿತ್ತು.