ಕೋಲ್ಕತ್ತಾ: ಆರ್.ಜಿ ಕರ್ ವೈದ್ಯಕೀಯ ಕಾಲೇಜು (RG Kar Medical College) ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ (Sandip Ghosh) ಟ್ರೈನಿ ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಆತ್ಮಹತ್ಯೆ ಅಂತ ಬಿಂಬಿಸಲು ಪ್ರಯತ್ನಿಸಿದ್ದರು. ಅದಕ್ಕಾಗಿ ಸಾಕ್ಷಿ ನಾಶಕ್ಕೆ ಯತ್ನಿಸಿದ್ದಾರೆ ಎಂಬುದಾಗಿ ಸಿಬಿಐ ಕೋರ್ಟ್ಗೆ ಸಲ್ಲಿಸಿದ ತನ್ನ ರಿಮ್ಯಾಂಡ್ ಕಾಪಿಯಲ್ಲಿ ತಿಳಿಸಿದೆ.
ಆರ್.ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅವ್ಯವಹಾರ ಮತ್ತು ʻಹ್ಯತ್ಯಾʼಚಾರ ಪ್ರಕರಣದಲ್ಲಿ ಸಾಕ್ಷ್ಯಾಧಾರ (Evidence) ನಾಶ ಆರೋಪದ ಮೇಲೆ ಸಂದೀಪ್ ಘೋಷ್ ಅವರನ್ನ ಸಿಬಿಐ (CBI) ಬಂಧಿಸಿದೆ. ಈ ಕೇಸ್ನಲ್ಲಿ ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ್ದಕ್ಕಾಗಿ ತಲಾ ಠಾಣೆಯ ಪೊಲೀಸ್ ಅಧಿಕಾರಿ ಅಭಿಜಿತ್ ಮೊಂಡಲ್ ಅವರನ್ನೂ ಸಹ ಬಂಧಿಸಲಾಗಿದೆ. ಇದನ್ನೂ ಓದಿ: ಮುಂದಿನ 24 ಗಂಟೆಯಲ್ಲಿ ದೆಹಲಿ ಗದ್ದುಗೆಗೆ ನೂತನ ಸಾರಥಿ – ಸಿಎಂ ರೇಸ್ನಲ್ಲಿರುವ ಟಾಪ್ -5 ಕಲಿಗಳು ಯಾರು?
ಈ ಪ್ರಕರಣದ ಕುರಿತು ಸಿಬಿಐ ಕೋರ್ಟ್ಗೆ ಸಲ್ಲಿಸಿದ ರಿಮ್ಯಾಂಡ್ ಕಾಪಿಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಡಾ. ಸಂದೀಪ್ ಘೋಷ್ ಆಗಸ್ಟ್ 9ರಂದು ಬೆಳಗ್ಗೆ 9:58ರ ವೇಳೆಗೆ ನಡೆದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರೂ ತಕ್ಷಣ ಆಸ್ಪತ್ರೆ ತಲುಪಲಿಲ್ಲ. ಪೊಲೀಸರಿಗೆ ದೂರು ಸಹ ದಾಖಲಿಸಲಿಲ್ಲ. ಸಂತ್ರಸ್ತೆಯ ದೇಹದ ಮೇಲೆ ಗಾಯದ ಗುರುತುಗಳಿದ್ದರೂ ಅದನ್ನು ಆತ್ಮಹತ್ಯೆ ಅಂತ ಬಿಂಬಿಸಲು ಹೊರಟಿದ್ದರು. ಆಸ್ಪತ್ರೆಯಿಂದ ಸಂತ್ರಸ್ತೆ ಪೋಷಕರಿಗೆ ದೂರವಾಣಿ ಕರೆ ಮಾಡಿ ಆತ್ಮಹತ್ಯೆ ಅಂತ ತಿಳಿಸಿದ್ದರು ಎಂದು ಸಿಬಿಐ ತನ್ನ ರಿಮ್ಯಾಂಡ್ ಕಾಪಿಯಲ್ಲಿ ಉಲ್ಲೇಖಿಸಿದೆ.
ಮುಂದುವರಿದು, ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯಾದ ನಂತರ ಘೋಷ್ ಪೊಲೀಸ್ ಅಧಿಕಾರಿ ಮತ್ತು ವಕೀಲರೊಂದಿಗೆ ಸಂಪರ್ಕದಲ್ಲಿದ್ದರು. ಸಂತ್ರಸ್ತೆ ಪೋಷಕರು ಆಸ್ಪತ್ರೆಗೆ ಬಂದಾಗಲೂ ಅವರನ್ನು ಭೇಟಿಯಾಗಲಿಲ್ಲ. ಘಟನೆ ನಂತರ ಮುಂದಿನ ವೈದ್ಯಕೀಯ ಪ್ರಕ್ರಿಯೆಗಳ ಬಗ್ಗೆ ಗಮನ ಹರಿಸಲಿಲ್ಲ. ಮೃತದೇಹವನ್ನು ತಕ್ಷಣವೇ ಶವಾಗಾರಕ್ಕೆ ಕಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಸಿಬಿಐ ಕೋರ್ಟ್ಗೆ ತಿಳಿಸಿದೆ. ಇದನ್ನೂ ಓದಿ: ವರದಕ್ಷಿಣೆಯಾಗಿ ಬೈಕ್ ಕೇಳಿದ್ದ ಪತಿ – ಕೊಡದಿದ್ದಕ್ಕೆ ತವರು ಮನೆಯಿಂದ ಕರೆತಂದು ಪತ್ನಿಯನ್ನೇ ಕೊಂದ!
ಇನ್ನೂ ಪೊಲೀಸ್ ಅಧಿಕಾರಿ ಮೊಂಡಲ್ ಸಹ ಮಾಹಿತಿ ಪಡೆದ ಒಂದು ಗಂಟೆ ನಂತರ ಘಟನಾ ಸ್ಥಳಕ್ಕೆ ತಲುಪಿದರು. ಘೋರ ಸ್ವರೂಪದಲ್ಲಿ ಕೊಲೆಯಾಗಿರುವುದು ಕಂಡುಬಂದರೂ ಸೂಕ್ತ ಸಮಯಕ್ಕೆ ಎಫ್ಐಆರ್ ದಾಖಲಿಸಲಿಲ್ಲ. ತಡರಾತ್ರಿ ಎಫ್ಐಆರ್ ದಾಖಲಿಸಲಾಗಿದೆ, ಸುಪ್ರೀಂ ಕೋರ್ಟ್ ಮತ್ತು ಕೋಲ್ಕತ್ತಾ ಹೈಕೋರ್ಟ್ ಪದೇ ಪದೇ ಹೇಳಿದರೂ ಪ್ರಕರಣದ ಕುರಿತು ತಲೆ ಕೆಡಿಸಿಕೊಂಡಿಲ್ಲ. ಕುಟುಂಬದ ಸದಸ್ಯರು ಮತ್ತೆ ಶವಪರೀಕ್ಷೆಗೆ ಒತ್ತಾಯಿಸಿದರೂ ಶವದ ಅಂತ್ಯಸಂಸ್ಕಾರಕ್ಕೆ ತರಾತುರಿಯಲ್ಲಿ ಅನುಮತಿ ನೀಡಿದ್ದಾರೆ ಎಂದು ಘಟನಾ ವಿವರವನ್ನು ಸಿಬಿಐ ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಸದ್ಯ ಕೋಲ್ಕತ್ತಾ ಹೈಕೋರ್ಟ್ ಡಾ.ಘೋಷ್ ಮತ್ತು ಪೊಲೀಸ್ ಅಧಿಕಾರಿ ಮೊಂಡಲ್ ಇಬ್ಬರನ್ನು ಎರಡು ದಿನಗಳ ಸಿಬಿಐ ಕಸ್ಟಡಿಗೆ ನೀಡಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: Kolkata Horror | ಸಾಕ್ಷಿ ನಾಶ, FIR ದಾಖಲಿಸಲು ವಿಳಂಬ; ಸಂದೀಪ್ ಘೋಷ್ ಸೇರಿ ಸಿಬಿಐನಿಂದ ಇಬ್ಬರ ಬಂಧನ