ಬಾಲಿವುಡ್ ನಟ ಅಮಿತಾಬ್ ಬಚ್ಚನ್ (Amitabh Bachchan) ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಬಿಗ್ಬಿ ಸ್ಪರ್ಧಿಯೊಬ್ಬರ ಮಾತಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಮದುವೆಯಾಗದ ಹೆಣ್ಣು ಮನೆಗೆ ಭಾರ ಎಂದ ಸ್ಪರ್ಧಿಗೆ ನಟ ಕ್ಲಾಸ್ ತೆಗೆದುಕೊಂಡಿದ್ದಾರೆ.
‘ಕೌನ್ ಬನೇಗಾ ಕರೋಡ್ ಪತಿ’ ಸೀಸನ್ 16ಕ್ಕೆ (Kaun Banega Crorepati- 16) ಕೃಷ್ಣ ಸುಲೇಖರ್ ಎಂಬುವವರು ಸ್ಪರ್ಧಿಯಾಗಿ ಭಾಗಿಯಾಗಿದ್ದರು. ತಮ್ಮ ಬದುಕಿನ ಕರಾಳ ಅಧ್ಯಾಯದ ಕುರಿತು ಮಾತನಾಡುತ್ತಿದ್ದರು. ಕರೋನಾ ಸಮಯದಲ್ಲಿ ಕೆಲಸವನ್ನು ಕಳೆದುಕೊಂಡಾಗ ತಾವು ಅನುಭವಿಸಿದ ಸಂಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. ನಾನು ಕೆಲಸ ಕಳೆದುಕೊಂಡಾಗ ನನಗೆ ಅರ್ಥವಾಗಿದ್ದು, ಏನೆಂದರೆ ಸರ್ ಹೇಗೆ ಮದುವೆಯಾಗದ ಹೆಣ್ಣು ಮಕ್ಕಳು ಮನೆಗೆ ಭಾರವಾಗಿರುತ್ತಾರೋ ಅದೇ ರೀತಿ ಕೆಲಸ ಇಲ್ಲದ ಗಂಡು ಮಕ್ಕಳು ಕೂಡ ಮನೆಗೆ ಭಾರ ಆಗುತ್ತಾರೆ ಎಂದು ಮಾತನಾಡಿದ್ದಾರೆ.
ಕೃಷ್ಣ ಸುಲೇಖರ್ ಅವರು ಆಡಿದ ಮಾತಿಗೆ ಬಿಗ್ಬಿ ಸೈಲೆಂಟ್ ಆದರು. ಆ ನಂತರ ಅಸಮಾಧಾನ ವ್ಯಕ್ತಪಡಿಸಿದರು. ನಾನು ನಿಮಗೆ ಒಂದು ಮಾತು ಹೇಳಲು ಬಯಸುತ್ತೇನೆ ಕೃಷ್ಣ. ಹೆಣ್ಣುಮಕ್ಕಳು ಯಾವತ್ತೂ ಕೂಡ ಮನೆಗೆ ಭಾರವಲ್ಲ ಎಂದರು. ಹೆಣ್ಣು ಮಕ್ಕಳು ಮನೆಯ ಭಾಗ್ಯ ಎಂದು ಹೇಳುವ ಮೂಲಕ ಕೃಷ್ಣ ಸುಲೇಖರ್ಗೆ ತಕ್ಕ ಉತ್ತರ ನೀಡಿದರು. ಬಿಗ್ಬಿ ಆಡಿದ ಈ ಮಾತು ಅಭಿಮಾನಿಗಳ ಮನಗೆದ್ದಿದೆ. ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.