ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ದಾಳಿ ಹಿಂದೆ ಬಿಜೆಪಿ ಕೈವಾಡ: ಸಚಿವ ತಂಗಡಗಿ

Public TV
2 Min Read
shivaraj tangadagi protest

ಆರೋಪಿಗಳು ಅಬ್ದುಲ್, ನಜೀರ್, ಖಾನ್ ಆಗಿದ್ರೆ ಬಿಜೆಪಿಗರು ಚಿತ್ರಣವನ್ನೇ ಬೇರೆಯಾಗಿಸ್ತಿದ್ರು

ಕೊಪ್ಪಳ: ದೆಹಲಿಯ ಪಾರ್ಲಿಮೆಂಟ್ ಒಳಗೆ‌ ನುಗ್ಗಿ ಅಧಿವೇಶನದ ವೇಳೆ ನಡೆದ ಸ್ಮೋಕ್ ಬಾಂಬ್ ದಾಳಿಯ ಹಿಂದೆ ಬಿಜೆಪಿ ನಾಯಕರ ಕೈವಾಡ ಇದೆ ಎಂದು‌ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ (Shivaraj Tangadagi) ಆರೋಪಿಸಿದರು.

ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ, ಅಧಿವೇಶನದಿಂದ ಸಂಸದರನ್ನು ಅಮಾನತು ಮಾಡಿದ ನಡೆ ಖಂಡಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಇಂದು (ಶುಕ್ರವಾರ) ಮಾತನಾಡಿದರು. ಕೇಂದ್ರ ಸರ್ಕಾರದ ಭದ್ರತೆ ವೈಫಲ್ಯದಿಂದಲೇ ಸ್ಮೋಕ್ ಬಾಂಬ್ ದಾಳಿ ನಡೆದಿದೆ.‌ ಘಟನೆ ಕುರಿತು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಉತ್ತರಿಸುವಂತೆ ಪಟ್ಟು ಹಿಡಿದ ಒಟ್ಟು 145 ಸಂಸದರನ್ನು ಅಮಾನತು ಮಾಡಿ, ಹೊರಗೆ ಹಾಕಲಾಗಿದೆ. ಬಿಜೆಪಿಗರು ತಮ್ಮ ಲೋಪ ಮುಚ್ಚಿ ಹಾಕಲು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಕಗ್ಗೊಲೆ, ಸರ್ವಾಧಿಕಾರಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ದಾಳಿಯ ಮಾಸ್ಟರ್‌ ಮೈಂಡ್‌ ಮೈಸೂರಿಗ ಮನೋರಂಜನ್‌: ದೆಹಲಿ ಪೊಲೀಸರು

Huge Parliament Security Breach Lok Sabha Speaker ombirla bans visitor gallery passes 1

ದಾಳಿ ಮಾಡಿದವರಿಗೆ ನಮ್ಮ ರಾಜ್ಯದ ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿದ್ದಾರೆ.‌ ಆದರೆ‌ ಪೊಲೀಸರು ಪ್ರತಾಪ್ ಸಿಂಹ ಅವರ ವಿಚಾರಣೆ ನಡೆಸಿಲ್ಲ. ಅವರ ಮೇಲೆ ಕ್ರಮ ಆಗಿಲ್ಲ. ಒಂದೊಮ್ಮೆ ಆರೋಪಿತರ ಹೆಸರುಗಳು ಅಬ್ದುಲ್, ನಜೀರ್, ಖಾನ್ ಆಗಿದ್ದರೆ ಬಿಜೆಪಿಗರು ಇದರ ಚಿತ್ರಣವೇ ಬೇರೆ ಆಗಿಸುತ್ತಿದ್ದರು. ಈ ಬಗ್ಗೆ ಮಾತನಾಡದ ಮೈಸೂರಿನ ಸಿಂಹ ಈಗ ಕಾಡಿಗೆ ಹೋಗಿದೆ ಎಂದು ಸಂಸದ ಪ್ರತಾಪ್ ಸಿಂಹ ಬಗ್ಗೆ ಲೇವಡಿ ಮಾಡಿದರು.

ರಾಜ್ಯಸಭೆ ಛೇರ್ಮನ್ ಹಾಗೂ ಉಪ ರಾಷ್ಟ್ರಪತಿ ಬಗ್ಗೆ ಅಣಕು ಮಾಡಿದರು ಎಂದು ಸ್ಥಳೀಯ ಬಿಜೆಪಿ ನಾಯಕರು ಪ್ರತಿಭಟನೆ ಮಾಡಿದ್ದಾರೆ. ಹಾಗಿದ್ದರೆ ಅಣಕು ಮಾಡುವವರನ್ನೆಲ್ಲ ದೇಶದಿಂದ ಹೊರಗೆ ಹಾಕಿ. ಅಣಕು ಮಾಡುವುದೊಂದು ಕಲೆ. ರಾಜಕೀಯ ನಾಯಕರನ್ನು ಅಣಕು ಮಾಡುವುದು ಸಹಜ. ಇದು ಪ್ರತಿಭಟನಾ ಸ್ವಾತಂತ್ರ್ಯಕ್ಕೆ ಧಕ್ಕೆ. ಕಲಾವಿದರಿಗೆ ಅವಮಾನ ಮಾಡಿದಂತೆ.‌ ಸಂಸತ್ ಭವನಕ್ಕೆ ಭದ್ರತೆ ಕೊಡಲು ವಿಫಲರಾದವರು ದೇಶಕ್ಕೇನು ಭದ್ರತೆ ನೀಡುತ್ತಾರೆ? ನೀವು ದೇಶ ಭಕ್ತರಲ್ಲ, ಮೋದಿ ಭಕ್ತರು ಎಂದು ಕಿಡಿಕಾರಿದರು. ಇದನ್ನೂ ಓದಿ: ಸ್ವಂತ ಮನೆಯಲ್ಲಿ ಪಿಜಿ ಮಾದರಿ ವಾಸ ಮಾಡ್ತಿದ್ದ ಮನೋರಂಜನ್

PRATAP SIMHA

ಅಧಿವೇಶನದಲ್ಲಿ ರೈತರು, ನಿರುದ್ಯೋಗ‌ ಸಮಸ್ಯೆ ಬಗ್ಗೆ ಮಾತನಾಡುವುದಿಲ್ಲ.‌ ಬದಲಿಗೆ ರಾಮನ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಕಳೆದ ಒಂಬತ್ತು ವರ್ಷದಲ್ಲಿ ಮಾಧ್ಯಮದ ಮುಂದೆ ಬಂದು ಮಾತನಾಡಿಲ್ಲ. ಮನ್ ಕಿ ಬಾತ್‌ನಿಂದ ದೇಶದ ಜನರ ಹೊಟ್ಟೆ ತುಂಬಲ್ಲ. ದೇಶದಲ್ಲಿ ಹಿಟ್ಲರ್ ಆಡಳಿತವಿದೆ ಎಂದು ಕುಟುಕಿದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಸಂಸದರನ್ನು ಅಧಿವೇಶನದಿಂದ ಅಮಾನತು ಮಾಡಿರುವುದು ಸರ್ವಾಧಿಕಾರಿ ಧೋರಣೆ. ಈ ದುರ್ಘಟನೆ ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಕೇಂದ್ರ ಸರ್ಕಾರದ ಸಂಪೂರ್ಣ ವೈಫಲ್ಯ ಕಾರಣ. ಪುಲ್ವಾಮಾ ದಾಳಿ, ಸಂಸದರ ಅಮಾನತು ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಅಹಂ, ಅಹಂಕಾರ, ಮದ, ಮತ್ಸರಗಳಿಂದ ತುಂಬಿರುವ ಕೇಂದ್ರ ಸರ್ಕಾರ ವಿರೋಧ ಪಕ್ಷದ ನಾಯಕರ ಮೇಲೆ ಇ.ಡಿ, ಸಿಬಿಐ ದಾಳಿ ಮಾಡಿಸುತ್ತಿದೆ. ಇದು ದೇಶದ ಜನತೆಗೆ ನೀಡಿರುವ ಕೆಟ್ಟ ಸಂದೇಶ ಎಂದರು.

Share This Article