ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಮಾಜಿ ಸಚಿವ ರಮಾನಾಥ್ ರೈ

Public TV
2 Min Read
ramanath rai

ಮಂಗಳೂರು: ಬಂಟ್ವಾಳ (Bantwal) ದಲ್ಲಿ ನನಗೆ ಸಣ್ಣ ಅಂತರದ ಸೋಲಾಗಿದೆ. ನನಗಿಂತಲೂ ಪಕ್ಷದಲ್ಲಿ ಹಿರಿಯರಿದ್ದಾರೆ. ಆದರೆ ನನಗೆ ವಯಸ್ಸಾಯಿತೆಂದು ನನ್ನ ಸ್ಪರ್ಧೆಗೆ ನಮ್ಮಲ್ಲಿ ಅಪಸ್ವರ ಬಂತು. ಹಾಗಾಗಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯೋ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಮಾಜಿ ಸಚಿವ ರಮಾನಾಥ್ ರೈ (Ramanath Rai) ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‍ (Congress) ಗೆ ದ.ಕ ಜಿಲ್ಲೆಯಲ್ಲಿ ಹಿನ್ನಡೆಯಾಗಿದೆ. ಗೆದ್ದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಾಂಗ್ರೆಸ್ ಮೇಲೆ ವಿಶ್ವಾಸವನ್ನಿಟ್ಟು ಜನ ಮತ ನೀಡಿದ್ದಾರೆ. ಜಿಲ್ಲೆಯಲ್ಲಿ ಸೋತರೂ ರಾಜ್ಯದಲ್ಲಿ ಸರ್ಕಾರ ನಮ್ಮದೇ ಇದೆ. ಜಿಲ್ಲೆಯಲ್ಲಿ ಕಾರ್ಯಕರ್ತರು ಎದೆಗುಂದಬಾರದು. ನಾನು ಕಡೆಯ ಬಾರಿ ಚುನಾವಣೆ ಸ್ಪರ್ಧೆ ಮಾಡೋದಾಗಿ ಹೇಳಿದ್ದೆ. ಚುನಾವಣಾ ರಾಜಕೀಯದಿಂದ ದೂರವಿದ್ದರೂ ಪಕ್ಷದ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುತ್ತೇನೆ ಎಂದು ಹೇಳಿದರು.

congress bjp jds

ಬಿಜೆಪಿ (BJP) ರಾಜ್ಯದಲ್ಲಿ ಸ್ಪಷ್ಟ ಬಹುಮತವನ್ನು ಯಾವತ್ತೂ ಪಡೆದಿಲ್ಲ. ಜನಸಂಘ ಇರುವಾಗಲೂ ಬಾಹ್ಯ ಬೆಂಬಲದಿಂದಲೇ ಗೆದ್ದಿದ್ದರು. ಜಿಲ್ಲೆಯಲ್ಲಿ ಸೋತರೂ ಗೆದ್ದರೂ ಪಕ್ಷವನ್ನು ಪ್ರಬಲವಾಗಿ ಕಟ್ಟಿದ್ದೇವೆ. ರಾಜ್ಯದ ಜನ ಯಾವತ್ತೂ ಬಿಜೆಪಿಗೆ ಬೆಂಬಲ ನೀಡಿಲ್ಲ. ಇದು ಬಸವಣ್ಣ (Basavanna) ಹುಟ್ಟಿದ ನಾಡು, ಇಲ್ಲಿ ಜ್ಯಾತ್ಯಾತೀತ ನಿಲುವಿನ ಜನರಿಗೆ ಜನ ಮಣೆ ಹಾಕುತ್ತಾರೆ. ಭವಿಷ್ಯದಲ್ಲಿ ಬಿಜೆಪಿ ಖಂಡಿತಾ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದಿಲ್ಲ ಎಂದು ಭವಿಷ್ಯ ನುಡಿದರು.

ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನವನ್ನು ರಾಜ್ಯದಲ್ಲಿ ಕಾಂಗ್ರೆಸ್ ಗಳಿಸಲಿದೆ. ಗ್ಯಾರಂಟಿ ಕಾರ್ಯಕ್ರಮ ಪ್ರಮಾಣವಚನ ಸ್ವೀಕಾರವಾದ ತಕ್ಷಣ ಅನುಷ್ಠಾನಕ್ಕೆ ಬರಲಿದೆ. ಕಾಂಗ್ರೆಸ್‍ನ ಯೋಜನೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚು ಪ್ರಯೋಜನ ತಂದಿದೆ ಎಂದರು. ಇದನ್ನೂ ಓದಿ: ಬಿಎಸ್‍ವೈ ಕಣ್ಣೀರು ಹಾಕಿ ರಾಜೀನಾಮೆ ಕೊಟ್ಟು ಬಂದಾಗಿನಿಂದ ಇಂಪ್ಯಾಕ್ಟ್ ಆಯ್ತು: ಶೆಟ್ಟರ್

ಪಾರ್ಟಿ ವಿರುದ್ಧ ನಾನು ಈವರೆಗೂ ಒಂದು ಶಬ್ದದ ಅಪಸ್ವರವನ್ನು ಎತ್ತಿಲ್ಲ. ಪಕ್ಷದ ಋಣವನ್ನು ಜೀವನ ಪರ್ಯಂತ ತೀರಿಸುತ್ತೇನೆ. ಸೋಲಿನ ಅವಲೋಕನವನ್ನು ಮಾಡಿದ್ದೇನೆ. ಚುನಾವಣೆ ಅನ್ನೋದು ನಾವು ಗ್ರಹಿಸಿದ ರೀತಿ ಅಗೋದಿಲ್ಲ. ಚುನಾವಣೆ ಗೆಲ್ಲುವ ವಿಶ್ವಾಸದಲ್ಲಿದ್ದೆ, ಸಮೀಕ್ಷೆಗಳೂ ಗೆಲ್ಲುವ ರೀತಿ ಇತ್ತು. ಸೋಲಿನ ಬಗ್ಗೆ ಅವಲೋಕನ ಮಾಡುತ್ತಿದ್ದೇನೆ. ಮಂಗಳೂರು, ಪುತ್ತೂರು ಹೊರತುಪಡಿಸಿ ಬೇರೆ ಎಲ್ಲಾ ಕಡೆ ಹಿನ್ನಡೆಯಾಗಿದೆ ಎಂದು ತಿಳಿಸಿದರು.

Share This Article