ಕಲಬುರಗಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ (BJP) ಪಕ್ಷ ಸಂಪೂರ್ಣ ಧೂಳಿಪಟವಾಗಲಿದೆ ಎಂದು ಕಾಂಗ್ರೆಸ್ (Congress) ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ (Baburao Chinchanasur) ಹೇಳಿದ್ದಾರೆ.
ಗುರುವಾರ ನಗರದ ಕಾಂಗ್ರೆಸ್ ಕಚೇರಿ (Congress Office) ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಖರ್ಗೆಯವರ ಕೋಟೆ ಇನ್ನಷ್ಟು ಗಟ್ಟಿಯಾಗಿದೆ. ಚಿತಾಪುರ ಕ್ಷೇತ್ರದಲ್ಲಿ ಈ ಬಾರಿ ಪ್ರಿಯಾಂಕ್ ಖರ್ಗೆ (Priyank Kharge) ಗೆಲುವು ಸಾಧಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಠ ಪಕ್ಷವಾಗಲಿದೆ ಎಂದರು.
ಕಲ್ಯಾಣ ಕರ್ನಾಟಕದಲ್ಲಿ ಓಡಾಟ ಮಾಡಿ, ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುವ ಮೂಲಕ ನನ್ನ ಶಕ್ತಿಯನ್ನು ತೋರಿಸುತ್ತೇನೆ. ಕೋಲಿ, ಕಬ್ಬಲಿಗ ಸಮಾಜವನ್ನು ಎಸ್ಟಿಗೆ ಸೇರಿಸುವುದಾಗಿ ಹೇಳಿದ ಬಿಜೆಪಿ, ಇಲ್ಲಿಯವರೆಗೆ ಕೇವಲ ತುಟಿಗೆ ತುಪ್ಪ ಸವರುತ್ತಾ ಬಂದಿದೆ. ಹೀಗಾಗಿ ಅವರ ನಡೆಯಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗ ನಗರ ಬಿಜೆಪಿ ಟಿಕೆಟ್ಗೆ ಫೈಟ್- ಈಶ್ವರಪ್ಪ V/S ಆಯನೂರು ಮಧ್ಯೆ ಜಟಾಪಟಿ
ಕೋಲಿ, ಕಬ್ಬಲಿಗ ಸಮಾಜ ಎಸ್ಟಿಗೆ ಸೇರಿಸಬೇಕಾದರೆ ಅದಕ್ಕೆ ಮಲ್ಲಿಕಾರ್ಜುನ್ ಖರ್ಗೆ ಅವರೊಬ್ಬರೇ ಸರಿಸಾಟಿ. ಈ ಹಿಂದೆ ಎಸ್.ಎಂ.ಕೃಷ್ಣ (S M Krishna) ನೇತೃತ್ವದ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ (D K Shivakumar) ಅವರು ನನಗೆ ಸಪ್ತ ಖಾತೆಗಳನ್ನು ಕೊಡಿಸಿದ್ದರು. ಅವರ ಋಣವನ್ನು ತಿರಿಸಲು ಸಾಧ್ಯವಿಲ್ಲ ಎಂದ ಅವರು, ಖರ್ಗೆ ಮತ್ತು ನನ್ನ ನಡುವೆ ಇದ್ದ ರಾಜಕೀಯ ಭಿನ್ನಾಭಿಪ್ರಾಯ ತಂದೆ-ಮಗನ ನಡುವಿನ ಮುನಿಸುನಂತಿತ್ತು. ಹೀಗಾಗಿಯೇ ನಾನು ಬಿಜೆಪಿಗೆ ಹೋಗಿದ್ದೆ. ಮತ್ತೆ ತವರು ಪಕ್ಷಕ್ಕೆ ಸೇರಿದ್ದು ಖುಷಿ ತಂದಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗದೇವ್ ಗುತ್ತೇದಾರ, ಅಲ್ಲಮಪ್ರಭು ಪಾಟೀಲ್, ರಾಜಗೋಪಾಲ್ ರೆಡ್ಡಿ, ನೀಲಕಂಠ ಮೂಲಗೆ, ಚಂದ್ರಿಕಾ ಪರಮೇಶ್ವರ್ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸಿಎಂ ಆಗೋದು ಪಕ್ಕಾ : ತೇಜಸ್ವಿ ಸೂರ್ಯ