– ಸಹಪಾಠಿ ಜೊತೆ ಸಾಫ್ಟ್ವೇರ್ ಎಂಜಿನಿಯರ್ ಮದುವೆ
ಬೆಂಗಳೂರು: ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಸಾಫ್ಟ್ವೇರ್ ಎಂಜಿನಿಯರ್ ಬೆಂಗಳೂರಿನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಶರಣ್ಯಾ (25) ಮೃತ ಸಾಫ್ಟ್ವೇರ್ ಎಂಜಿನಿಯರ್. ಶುಕ್ರವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶರಣ್ಯಾ ಸಾವಿನ ಬಗ್ಗೆ ತಿಳಿದ ಆಕೆಯ ಪೋಷಕರು ಬೆಂಗಳೂರಿಗೆ ಬಂದಿದ್ದಾರೆ. ಶರಣ್ಯಾ ಪತಿ ಕುಡಿತಕ್ಕೆ ದಾಸನಾಗಿದ್ದು, ಆಗಾಗ ಶರಣ್ಯಾಗೆ ಹೊಡೆಯುತ್ತಿದ್ದನು. ಈ ಬಗ್ಗೆ ಶರಣ್ಯಾ ದೂರು ಕೂಡ ನೀಡಿದ್ದರು. ಇದರಿಂದ ಪೋಷಕರು ಅಳಿಯನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಮೃತ ಶರಣ್ಯಾ ತನ್ನ ಸಹಪಾಠಿ ರೋಹಿತ್ ಜೊತೆ ಮದುವೆಯಾಗಿದ್ದು, ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಮದುವೆಯ ನಂತರ ರೋಹಿತ್ ಕುಡಿದು ಮನೆಗೆ ಬಂದು ನಮ್ಮ ಮಗಳು ಶರಣ್ಯಾ ಜೊತೆ ಆಗಾಗ ಜಗಳವಾಡುತ್ತಿದ್ದನು. ನಂತರ ಆಕೆಗೆ ಹೊಡೆಯಲು ಪ್ರಾರಂಭಿಸಿದ್ದನು ಎಂದು ಪೋಷಕರು ಆರೋಪಿಸಿದ್ದಾರೆ.
ಕೊನೆಗೆ ಕಿರುಕುಳವನ್ನು ಸಹಿಸಲಾಗದೆ ಶರಣ್ಯಾ ಮತ್ತೆ ಪೋಷಕರ ಮನೆಗೆ ಹಿಂದಿರುಗಿದ್ದರು. ಮೂರು ತಿಂಗಳ ಹಿಂದೆ ರೋಹಿತ್, ಶರಣ್ಯಾ ಪೋಷಕರು ಮತ್ತು ಇತರ ಕುಟುಂಬದ ಹಿರಿಯರ ಜೊತೆ ಮಾತನಾಡಿ ಮತ್ತೆ ಆಕೆಯನ್ನ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದನು. ಆಕೆಯ ಮೇಲೆ ಮತ್ತೆ ಕೈ ಮಾಡಲ್ಲ, ಜಗಳ ಮಾಡಲ್ಲ ಎಂದು ಹೇಳಿ ಪೋಷಕರಿಗೆ ಸಮಾಧಾನ ಮಾಡಿದ್ದನು ಎಂದು ತಿಳಿದು ಬಂದಿದೆ.
ನಮ್ಮ ಮಗಳ ಸಾವಿನ ಹಿಂದೆ ರೋಹಿತ್ ಕೈವಾಡ ಹಿದೆ. ಆತನೇ ನಮ್ಮ ಮಗಳನ್ನು ಕೊಲೆ ಮಾಡಿರಬಹುದು ಎಂದು ಪೋಷಕರು ಆರೋಪಿಸಿದ್ದಾರೆ. ಸದ್ಯಕ್ಕೆ ಆತನ ವಿರುದ್ಧ ಶರಣ್ಯಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಸಮಗ್ರ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.