ಬೆಂಗಳೂರು: ಐಎಎಸ್ ಅಧಿಕಾರಿ ವಿಜಯ್ಶಂಕರ್ ಸಾವಿನ ಸುತ್ತ ಹಲವು ಅನುಮಾನಗಳು ಮೂಡುತ್ತಿವೆ. ಅಧಿಕಾರಿ ಆತ್ಮಹತ್ಯೆಗೂ ಮುನ್ನ ಕುತ್ತಿಗೆಗೆ ನೋವಿನ ಪ್ಯಾಡ್ ಧರಿಸಿದ್ದರು. ಗಟ್ಟಿಯಾಗಿದ್ದ ಪ್ಲಾಸ್ಟಿಕ್ ಪ್ಯಾಡ್ ಮೇಲೆ ಕುತ್ತಿಗೆ ಬಿಗಿದಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೆ ಸಾವಿಗೂ ಮುನ್ನ ಡೆತ್ ನೋಟ್ ಬರೆದಿದ್ದಾರೆಯೇ ಎಂದು ರಾತ್ರಿ ಪೊಲೀಸರು ಸುದೀರ್ಘವಾಗಿ ಮೃತದೇಹದ ಪಂಚನಾಮೆ ನಡೆಸಿದ್ದಾರೆ.
ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆಗೆ ಕಾರಣವೇನು?, ಐಎಂಎ ಹಗರಣದ ವಿಚಾರಣೆಗೆ ಹೆದರಿ ಸಾವಿಗೆ ಶರಣಾದ್ರಾ..? ಸಿಬಿಐ ತನಿಖೆಯಿಂದ ಬಂಧನದ ಭೀತಿ ಎದುರಾಗಿತ್ತಾ..?, ಬಂಧನ ಭೀತಿಯಲ್ಲಿ ವಿಜಯ್ ಶಂಕರ್ ಆತ್ಮಹತ್ಯೆಗೆ ಶರಣಾದ್ರಾ?, ಕೌಟುಂಬಿಕ ಕಲಹ, ವೈಯಕ್ತಿಕ ವಿಚಾರದಲ್ಲಿ ಖಿನ್ನತೆ ಒಳಗಾಗಿದ್ರಾ ಹೀಗೆ ವಿವಿಧ ಆಯಾಮಗಳಿಂದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮಧ್ಯರಾತ್ರಿ ವಿಕ್ಟೋರಿಯಾ ಶವಾಗಾರಕ್ಕೆ ಮೃತ ದೇಹ ರವಾನಿಸಲಾಗಿದ್ದು, ಇಂದು ಕೊರೊನಾ ಸ್ವಾಬ್ ಟೆಸ್ಟ್ ನಂತರ ಪೋಸ್ಟ್ ಮಾರ್ಟಮ್ ಮಾಡಲಾಗುತ್ತೆ. ಪೋಸ್ಟ್ ಮಾರ್ಟಮ್ ನಂತರ ಮೃತ ದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತೆ. ಬಹುಕೋಟಿ ಐಎಂಎ ಹಗರಣದಲ್ಲಿ ಜೈಲು ವಾಸ ಅನುಭವಿಸಿದ್ದ ಐಎಎಸ್ ಅಧಿಕಾರಿ ವಿಜಯ್ಶಂಕರ್ ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿಜಯ್ ಶಂಕರ್, 20 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಮರಳಿದ್ದರು. ಬೆಳಗ್ಗೆ ಕಚೇರಿಯಲ್ಲಿ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೂ ಸಭೆ ನಡೆಸಿದ್ದು, ಲವಲವಿಕೆಯಿಂದಲೇ ಕೆಲಸ ಮಾಡಿದ್ದರು. ಮಧ್ಯಾಹ್ನ ಕಚೇರಿಯಿಂದ ತೆರಳಿದ್ದ ವಿಜಯ್ ಶಂಕರ್ ಸಂಜೆ ಖಿನ್ನತೆಗೆ ಒಳಗಾಗಿ ನೇಣಿಗೆ ಶರಣಾಗಿದ್ದಾರೆ.
ಐಎಂಎ ಕೇಸ್ನಲ್ಲಿ ಮನ್ಸೂರ್ ಖಾನ್ನಿಂದ 1.5 ಕೋಟಿ ರೂ.ಪಡೆದ ಆರೋಪ ವಿಜಯ್ ಶಂಕರ್ ಮೇಲಿತ್ತು. ಈ ಬಗ್ಗೆ 3 ದಿನದ ಹಿಂದೆ ವಿಚಾರಣೆಗೆ ಹಾಜರಾಗಲು ಸಿಬಿಐ ನೋಟಿಸ್ ಕೂಡ ಕೊಟ್ಟಿತ್ತು. ಒಟ್ಟನಲ್ಲಿ ಬಂಧನ ಭೀತಿಯಿಂದ ವಿಜಯ್ ಶಂಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.