ತುಮಕೂರು: ಮಾಜಿ ಸಿಎಂ ಕುಮಾರಸ್ವಾಮಿ ಆಪ್ತ ಕಾರ್ಯದರ್ಶಿ, ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ ಹಾಗೂ ನನ್ನದು ಫೋನ್ ಟ್ಯಾಪಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್ ಅವರು, ಪೆಗಾಸಸ್ ಫೋನ್ ಟ್ಯಾಪಿಂಗ್ ಕಾನೂನಿಗೆ ವಿರೋಧ. ಅನೇಕ ಸರ್ಕಾರಗಳು ಫೋನ್ ಟ್ಯಾಪಿಂಗ್ ನಿಂದ ಬಿದ್ದು ಹೊಗಿವೆ. ನಮ್ಮ ರಾಜ್ಯದಲ್ಲೂ ಉದಾಹರಣೆ ಇದೆ. ಅನೇಕ ಸಚಿವರು, ಅಧಿಕಾರವನ್ನು ಕಳೆದುಕೊಂಡಿರುವ ಉದಾಹರಣೆ ದೇಶದಲ್ಲಿದೆ. ರಾಜ್ಯದಲ್ಲಿ 17 ಶಾಸಕರು ಕಾಂಗ್ರೆಸ್, ಜೆಡಿಎಸ್ ನಿಂದ ಹೋದರು. ಅವರು ಸುಮ್ಮನೆ ಹೋಗಿದ್ದಾರೆ ಎಂದು ಅನಿಸುತ್ತಿಲ್ಲ ಹಣ ಪಡೆದುಕೊಂಡು ಹೋಗಿರಬಹುದು. ಆ ಸಂದರ್ಭದಲ್ಲಿ ಫೋನ್ ಟ್ಯಾಪಿಂಗ್ ನಡೆದಿದೆ ಎಂದು ಆರೋಪಿಸಿದ್ದಾರೆ.
ರಾಜಕೀಯ ನಾಯಕರ, ಪತ್ರಕರ್ತರ, ಕೈಗಾರಿಕೊದ್ಯಮಿಗಳ ಫೋನ್ ಟ್ಯಾಪಿಂಗ್ ಆಗಿದೆ. ಇವರೆಲ್ಲರ ಟೆಲಿಫೋನ್ ಟ್ಯಾಪ್ ಯಾವ ಕಾರಣಕ್ಕೆ ಆಗಿದೆ. ಪೆಗಾಸಸ್ ಕಂಪನಿ ನೇರವಾಗಿ ಬಂದು ಟ್ಯಾಪ್ ಮಾಡಲು ಸಾಧ್ಯವಿಲ್ಲ. ಟ್ಯಾಪ್ ಮಾಡಬೇಕಾದರೇ ಪ್ರಸ್ತುತ ಸರ್ಕಾರದ ಅನುಮತಿ ಬೇಕು. ಗೃಹಖಾತೆ ಕಾರ್ಯದರ್ಶಿ ಅನುಮತಿ ನೀಡುತ್ತಾರೆ. ಇಂದು ಹೊರದೇಶದ ಪೆಗಾಸಿಸ್ ಬಂದು ಟ್ಯಾಪ್ ಮಾಡ್ತಾರೆ ಅಂದರೆ ಯಾರು ಅನುಮತಿ ನೀಡಿದರು? ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅನುಮತಿ ನೀಡಿರಬೇಕು. ಕೇಂದ್ರ ಸರ್ಕಾರ ಇಲ್ಲಿ ಅನುಮತಿ ಕೊಟ್ಟಿರಬೇಕು. ಇಲ್ಲದಿದ್ದರೆ ಹೇಗೆ ಫೋನ್ ಟ್ಯಾಪಿಂಗ್ ಮಾಡಿದರು? ಈ ಬಗ್ಗೆ ಕೇಂದ್ರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಫೋನ್ ಕದ್ದಾಲಿಕೆ ಯಾಕೆ? ಹೇಗೆ? ಯಾರು ಮಾಡಬಹುದು?
ಕೇಂದ್ರ ಸರ್ಕಾರ ಅನುಮತಿ ನೀಡಿದೆಯೇ ಎಂಬ ಅನುಮಾನ. ಇಲ್ಲಾ ಅವರೇ ಮಾಡಿದ್ದಾರ? ನಮ್ಮ ರಕ್ಷಣೆ ಕೇಂದ್ರ ಮಾಡುತ್ತಿದೆಯಾ ಇಲ್ವಾ ಅನ್ನೋ ಅನುಮಾನ ಬರ್ತಿದೆ. ಯಾವ ಉದ್ದೇಶಕ್ಕೆ ಫೋನ್ ಟ್ಯಾಪ್ ಆಗಿದೆ? ಜುಲೈ ತಿಂಗಳಲ್ಲಿ ಟೆಲಿಫೋನ್ ಟ್ಯಾಪ್ ನಡೆದಿರಬಹುದು. ಆಗಿನ ಫೋನ್ ಸಂಭಾಷಣೆ ಬಳಸಿಕೊಂಡು ಸರ್ಕಾರ ಕೆಡವಿರಬಹುದು ಎಂದು ಆರೋಪಿಸಿದರು. ಸರ್ಕಾರ ಕೆಡವಲು ಪೆಗಾಸಿಸ್ ಸಾಫ್ಟ್ವೇರ್ ಬಳಸಿಕೊಂಡು ಮಾಡಿದ್ದಾರಾ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ನಡೆಯಬಾರದು ಎಂದು ಪರಮೇಶ್ವರ್ ಫೋನ್ ಟ್ಯಾಪಿಂಗ್ ಅನ್ನು ಖಂಡಿಸಿದರು.