ಬೆಂಗಳೂರು: ನಾಯಕತ್ವ ಗೊಂದಲ, ಕೆಲವು ಶಾಸಕರ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಅಭಿಪ್ರಾಯ ಸಂಗ್ರಹಕ್ಕೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಆದರೆ ಅರುಣ್ ಸಿಂಗ್ ಆಗಮನಕ್ಕೂ ಮುನ್ನವೇ ವೀರಶೈವ ಲಿಂಗಾಯತ ಯುವ ವೇದಿಕೆ ಸಿಎಂ ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದೆ. ವೀರಶೈವ ಲಿಂಗಾಯತ ಯುವ ವೇದಿಕೆಯು ಪತ್ರಿಕಾ ಪ್ರಕಟಣೆ ಹೊರಡಿಸಿ ಯಡಿಯೂರಪ್ಪ ಸಮರ್ಥ ನಾಯಕರಾಗಿದ್ದು, ಅವರನ್ನೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಸುವಂತೆ ಆಗ್ರಹಿಸಿದೆ.
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದು ಯಾವುದೇ ಕಾರಣಕ್ಕೂ ಯಡಿಯೂರಪ್ಪನವರನ್ನು ಸಿಎಂ ಹುದ್ದೆಯಿಂದ ಬದಲಾಯಿಸಬಾರದು.ಕೆಲವರು ಅನಾವಶ್ಯಕವಾಗಿ ಯಡಿಯೂರಪ್ಪನವರ ಘನತೆ ಗೌರವಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿ ಮಾನಸಿಕವಾಗಿ ನೋವು ಉಂಟು ಮಾಡುವಂತೆ ನಡೆದುಕೊಳ್ಳುತ್ತಿರುವುದು ಯಡಿಯೂರಪ್ಪನವರಿಗೆ ಅಷ್ಟೇ ಅಲ್ಲ ಇಡೀ ವೀರಶೈವ-ಲಿಂಗಾಯತ ಸಮಾಜಕ್ಕೆ ಮಾಡುವಂತಹ ಅವಮಾನವಾಗುತ್ತದೆ. ಈ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಕರುಣಾನಿಧಿಯವರು ಹದಿನೈದು ವರ್ಷಗಳ ಕಾಲ ಗಾಲಿ ಕುರ್ಚಿಯಲ್ಲಿ ಅಧಿಕಾರ ನಡೆಸಿರುವಾಗ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಯುವಕರು ನಾಚುವಂತಹ ರೀತಿಯಲ್ಲಿ ಸಕ್ರಿಯ ರಾಜಕಾರಣದಲ್ಲಿ ಇರುವಾಗ ಬಿ.ಎಸ್. ಯಡಿಯೂರಪ್ಪನವರು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಂತರಾಗಿದ್ದು ರಾಜ್ಯವನ್ನು ಮುನ್ನಡೆಸಿಕೊಂಡು ಹೋಗುವಂತಹ ಸಾಮಥ್ರ್ಯವನ್ನು ಹೊಂದಿರುವುದರಿಂದ ಅನಾವಶ್ಯಕ ಗೊಂದಲ ಸೃಷ್ಟಿ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದು ಸೂಕ್ತವಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಏನ್ ಹೇಳ್ಬೇಕೋ ಅದನ್ನು ಕರ್ನಾಟಕದಲ್ಲೇ ಹೇಳ್ತೀನಿ: ಅರುಣ್ ಸಿಂಗ್
ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಶಾಸಕರು ಗೆಲ್ಲಲು ಯಡಿಯೂರಪ್ಪನವರ ಪಾತ್ರ ಪ್ರಮುಖವಾಗಿದ್ದು ಸರ್ಕಾರ ರಚಿಸುವಲ್ಲಿ ಅನೇಕ ವ್ಯಕ್ತಿಗಳ ತ್ಯಾಗ ಮತ್ತು ಹೋರಾಟದ ಫಲ ಕಾರಣವಾಗಿರುತ್ತದೆ. ಹೀಗಿರುವಾಗ ಅನಾವಶ್ಯವಾಗಿ ಕೆಲವರು ಯಡಿಯೂರಪ್ಪನವರಿಗೆ ತೊಂದರೆ ನೀಡುತ್ತಿರುವುದನ್ನು ಶ್ರೀ ವೀರಶೈವ ಲಿಂಗಾಯತ ಯುವ ವೇದಿಕೆ ಖಂಡಿಸುವುದಲ್ಲದೆ ಮಾನ್ಯ ಯಡಿಯೂರಪ್ಪನವರು ಪೂರ್ಣಾವಧಿ ಅಧಿಕಾರ ಪೂರೈಸಲು ವೀರಶೈವ ಲಿಂಗಾಯಿತ ಯುವ ವೇದಿಕೆ ಸದಾ ಬೆಂಬಲಿಸುತ್ತದೆ ಎಂದು ತಿಳಿಸಲಾಗಿದೆ.