ಗದಗ: ಮಹಾಮಾರಿ ಕೊರೊನಾ ಇಡೀ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಕೊರೊನಾ ಬಿಸಿ ಈಗ ಉತ್ತರ ಕರ್ನಾಟಕದ ಏಕೈಕ ಮೃಗಾಲಯ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದೆ.
ಆದಾಯವಿಲ್ಲದೇ ಪ್ರಾಣಿಗಳನ್ನು ಹೇಗೆ ಸಾಕುವುದು ಎಂಬ ಪರಿಸ್ಥಿತಿಯಲ್ಲಿ ಝೂ ಇದೆ. ಮಹಾಮಾರಿ ಕೊರೊನಾದಿಂದ ಮುದ್ರಣಾ ಕಾಶಿಯ ಮಕ್ಕಳ ಉದ್ಯಾನವನ ಹಾಗೂ ಮೃಗಾಲಯ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ ಕೊರೊನಾದ ಆರ್ಥಿಕ ಕರಿ ಛಾಯೆಯಿಂದ ಹೊರಬರಲು ಝೂ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಲಾಗುತ್ತಿದೆ.
ಉತ್ತರ ಕರ್ನಾಟಕದ ಏಕೈಕ ಮೃಗಾಲಯವೆಂದೇ ಹೆಸರಾಗಿರುವ ಗದಗದ ಬಿಂಕದಕಟ್ಟಿ ಝೂ ಸಾಕಷ್ಟು ಆಕರ್ಷಣಿಯವಾಗಿದ್ದು, ಲಾಕ್ಡೌನ್ ಮೊದಲು ಈ ಮೃಗಾಲಯಕ್ಕೆ ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಾಣಿ, ಪಕ್ಷಿ ಪ್ರಿಯರು, ಪ್ರವಾಸಿಗರು ಬರುತ್ತಿದ್ದರು. ಆದರೆ, ಈ ಕಿಲ್ಲರ್ ಕೊರೊನಾ ಅಟ್ಟಹಾಸದಿಂದ ಮೃಗಾಲಯಕ್ಕೆ ಬೀಗ ಬಿದ್ದಿದೆ. ಹೀಗಾಗಿ ಬಿಂಕದಕಟ್ಟಿ ಮೃಗಾಲಯಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇಲ್ಲಿನ ಪ್ರಾಣಿಗಳನ್ನು ಸಾಕುವುದು ಅರಣ್ಯ ಇಲಾಖೆಗೆ ಕಷ್ಟ ಸಾಧ್ಯವಾಗಿದೆ. ಇತ್ತೀಚೆಗೆ ಸ್ಯಾಂಡಲ್ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಝೂ ಗಳಲ್ಲಿನ ಪ್ರಾಣಿಗಳನ್ನ ದತ್ತು ಪಡೆಯುವುದಕ್ಕೆ ಕರೆ ನೀಡಿದ್ದರು. ಇದರಿಂದ ಅಭಿಮಾನಿಗಳು ಮುಂದೆ ಬಂದು ಅನೇಕ ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ. ನಟ ದರ್ಶನ್ ಕರೆಯಿಂದ ನಮ್ಮ ಬಿಂಕದಕಟ್ಟಿ ಮೃಗಾಲಯಕ್ಕೆ 4 ಲಕ್ಷಕ್ಕೂ ಅಧಿಕ ಹಣ ಹರಿದು ಬರುತ್ತಿದೆ. ಇನ್ನು ಅಭಿಮಾನಿಗಳು ಮುಂದೆ ಬಂದು ದತ್ತು ಪಡೆಯಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಈ ಮೃಗಾಲಯದಲ್ಲಿ 37 ಜಾತಿಯ 396 ಪ್ರಾಣಿ ಪಕ್ಷಿಗಳಿವೆ. ಗಿಳಿ, ಹದ್ದು, ಕಾಡು ಕೋಳಿ, ಎಮ್ಮೊ ಕೋಳಿ, ಕೋಗಿಲೆ, ನವಿಲು ನಂತಹ ಅನೇಕ ಜಾತಿಯ ಪಕ್ಷಿಗಳಿವೆ. ನರಿ, ಕರಡಿ, ಹುಲಿ, ಚಿರತೆ, ಸಿಂಹಗಳಂತಹ ಕ್ರೂರ ಪ್ರಾಣಿಗಳು ಈ ಮೃಗಾಲಯದಲ್ಲಿ ಕಾಣಬಹುದು. ಇದರ ನಿರ್ವಹಣೆಗೆ ವಾರ್ಷಿಕ 1 ಕೋಟಿ 90 ಲಕ್ಷ ರೂಪಾಯಿ ವ್ಯವವಾಗುತ್ತದೆ. ಡೋನೇಷನ್ ರೂಪದಲ್ಲಿ 45 ಸಾವಿರ ರೂಪಾಯಿ ಬಂದಿದೆ. ಲಾಕ್ಡೌನ್ಗೂ ಮುನ್ನ ಪ್ರವೇಶ ಫೀಜ್ ನಿಂದಾಗಿ 2 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಉಳಿದ ಸುಮಾರು 1 ಕೋಟಿ 80 ಲಕ್ಷ ರೂಪಾಯಿಯಷ್ಟು ಸರ್ಕಾರಕ್ಕೆ ಹೊರೆಯಾಗುತ್ತದೆ. ಹೀಗಾಗಿ ಝೂಗಳಲ್ಲಿ ಪ್ರಾಣಿ ಪಕ್ಷಿಗಳ ದತ್ತು ಪಡೆಯಲು ಅವಕಾಶ ಮಾಡಲಾಗಿದೆ. ವಾರ್ಷಿಕ 1 ಸಾವಿರ ರೂಪಾಯಿಯಿಂದ 1 ಲಕ್ಷದ ವರೆಗೆ ಹಣ ಪಾವತಿಸಿ ವಿವಿಧ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯಲು ಅವಕಾಶವಿದೆ. ಈ ವರ್ಷ ವಿವಿಧ ದಾನಿಗಳಿಂದ ಕೇವಲ 4 ಲಕ್ಷ ಮಾತ್ರ ಸಂಗ್ರಹವಾಗಿತ್ತು. ನಟ ದರ್ಶನ್ ಕರೆ ನೀಡಿದ ನಂತರ ಅವರ ಅಭಿಮಾನಿಗಳು ಮತ್ತೆ 4 ಲಕ್ಷ ರೂಪಾಯಿ ಮೊತ್ತ ನೀಡಿ ಜನರು ಪ್ರಾಣಿಗಳ ದತ್ತು ಪಡೆದಿದ್ದಾರೆ. ಜನ ಮುಂದೆ ಬಂದು ಮೂಕ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ನಾನು ದರ್ಶನ್ ಎನ್ನುವ ಮೂಲಕ ನೀವು ಬನ್ನಿ ಪ್ರಾಣಿ ಪಕ್ಷಿ ರಕ್ಷಿಸಿ ಎಂದು ಪ್ರಾಣಿ ಪ್ರಿಯರು ಹೇಳುತ್ತಿದ್ದಾರೆ.
ಮಾತನಾಡುವ ಮನುಜನನ್ನು ದತ್ತು ತೆಗೆದುಕೊಂಡು ಮಾನವೀಯತೆ ಮೆರೆಯುವುದನ್ನು ನೋಡಿದ್ದೇವೆ. ಆದರೆ ಮಾತು ಬಾರದ ಈ ಮೂಕ ಪ್ರಾಣಿಗಳಿಗೆ ಮನ ಮಿಡಿಯುವ ಹೃದಯವಂತರು ಬೇಕಾಗಿದೆ. ಪ್ರಮುಖವಾಗಿ ಮಾಂಸಾಹಾರಿ ಪ್ರಾಣಿಗಳನ್ನು ದಾನಿಗಳು ದತ್ತು ಪಡೆಯುವಂತೆ ಮೃಗಾಲಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಸರ್ಕಾರ ಕೂಡಾ ಇಂಥಹ ಕಾರ್ಯಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ಅನುದಾನ ಬಿಡುಗಡೆ ಮಾಡಬೇಕಾಗಿದೆ. ಇದನ್ನೂ ಓದಿ: ಉತ್ತರ ಕನ್ನಡದ ಜೋಯಿಡಾದಲ್ಲಿ ಭೂಕುಸಿತ- ಹೆದ್ದಾರಿ ಬಂದ್