ಚಿತ್ರದುರ್ಗ: ಮಂತ್ರಿ ಸ್ಥಾನ ಕೊಡಲೇಬೇಕೆನ್ನಲು ಅದು ನಮ್ಮ ಆಸ್ತಿ ಅಲ್ಲ ಎಂದು ಸಚಿವ ಸ್ಥಾನದಿಂದ ವಂಚಿತರಾಗಿ ಬಿಜೆಪಿ ವಿರುದ್ಧ ಮುನಿದಿದ್ದ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಕೊವೇರಹಟ್ಟಿ ಗ್ರಾಮದಲ್ಲಿ ಶ್ರೀ ಕೆಂಪೇಗೌಡ ಪ್ರತಿಮೆ ಉದ್ಘಾಟನೆ ನೆರವೇರಿಸಿ, ಬಳಿಕ ಮಾತನಾಡಿದ ಅವರು, ಪ್ರಮಾಣವಚನ ಸ್ವೀಕರಿಸುವ ಕೊನೇ ಕ್ಷಣದಲ್ಲಿ ಮಂತ್ರಿ ಸ್ಥಾನ ಕೈತಪ್ಪಿದ್ದಕ್ಕೆ ಬೇಸರವಿದೆ. ಆದರೆ ನಮ್ಮ ಪಕ್ಷದ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ಮಂತ್ರಿಗಿರಿ ನೀಡಲು ಈಗ ಪಕ್ಷ ಇನ್ನೂ ನಿರ್ಧರಿಸಿಲ್ಲ. ಹೀಗಾಗಿ ಅವಕಾಶ ಬರುವವರೆಗೆ ತಾಳ್ಮೆಯಿಂದ ಕಾಯಲು ನಿರ್ಧರಿಸಿದ್ದೇನೆ. ಅಲ್ಲದೆ ಹಿಂದುಳಿದ ವರ್ಗಕ್ಕೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ ಎಂದರು.
ಇತರೆ ಹಿಂದುಳಿದ ವರ್ಗಕ್ಕೂ ಅವಕಾಶ ನೀಡುವ ವಿಶ್ವಾಸವಿದೆ. ಆದರೆ ನಾನು ಮಂತ್ರಿಗಿರಿಗಾಗಿ ಲಾಬಿ ಮಾಡಿಲ್ಲ. ಸಂಪುಟದಲ್ಲಿ ಮಂತ್ರಿ ಸ್ಥಾನ ಕೊಟ್ಟರೆ ನಿಭಾಯಿಸುವೆ. ಹಾಗೆಯೇ ಪಕ್ಷದ ವಿಚಾರದಲ್ಲಿ ನಾನು ಯಾರ ಆಪ್ತಳೂ ಅಲ್ಲ, ಪೂರ್ಣಿಮಾ ಬಿಜೆಪಿಗೆ ಆಪ್ತಳಾಗಿದ್ದು, ಬಿಎಸ್ ವೈ ಅವರು ಪಾರ್ಟ್ ಆಫ್ ಬಿಜೆಪಿ ಎನಿಸಿದ್ದಾರೆ. ನಮ್ಮ ಪಕ್ಷದಲ್ಲಿ ಅವರಿಗೆ ಆಪ್ತರು, ಇವರಿಗೆ ಪರಮಾಪ್ತರು ಎಂಬ ಯೋಚನೆ ಇಲ್ಲ ಎಂದು ಸಷ್ಟಪಡಿಸಿದರು.
ಬಿಜೆಪಿಯಲ್ಲಿ ಬಿಎಸ್ ವೈ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸದಾನಂದಗೌಡ ಎಲ್ಲರೂ ನಮ್ಮ ನಾಯಕರು. ಎಲ್ಲರ ಮನೆಯಂತೆ ನಮ್ಮ ಪಕ್ಷದ ಸಚಿವ ಸಂಪುಟದಲ್ಲಿ ವ್ಯತ್ಯಾಸ ಸಹಜವಾಗಿದೆ. ಆ ಸಮಸ್ಯೆಯನ್ನು ಸಿಎಂ ಬೊಮ್ಮಾಯಿ ಹಾಗೂ ಕಟೀಲ್ ಅವರು ಸಮರ್ಥರಿದ್ದು, ಎಲ್ಲವನ್ನು ಸರಿಪಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶಿವಶರಣ ಮಾದಾರಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಹಾಗೂ ಕಬೀರಾನಂದ ಆಶ್ರಮದ ಶಿವಾಲಿಂಗಾನಂದ ಶ್ರೀ ಭಾಗಿಯಾಗಿದ್ದರು.