– ಬಾಲಕನ ಜೊತೆಯೇ ವಾಗ್ವಾದಕ್ಕಿಳಿದು ಕೋಲಿನಿಂದ ಹಲ್ಲೆಗೈದ್ರು
ಲಕ್ನೋ: ತೋಟಕ್ಕೆ ನುಗ್ಗಿ ಎಮ್ಮೆ ಬೆಳೆ ಹಾಳು ಮಾಡಿತೆಂದು ಸಿಟ್ಟುಗೊಂಡ ಮೂವರು ಕುಡುಕರು 15 ವರ್ಷದ ಬಾಲಕನ ಹೊಡೆದು ಕೊಂದ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ಘಟನೆಯ ಬಳಿಕ ಮೂವರು ಆರೋಪಿಗಳು ಕೂಡ ಪರಾರಿಯಾಗಿದ್ದಾರೆ. ಮೃತ ದುರ್ದೈವಿ ಬಾಲಕನನ್ನು ಕುಲ್ದೀಪ್ ಯಾದವ್ ಎಂದು ಗುರುತಿಸಲಾಗಿದೆ.
ಯಾದವ್ ಶನಿವಾರ ತನ್ನ ಗ್ರಾಮದಲ್ಲಿ ಗೆಳೆಯರ ಜೊತೆ ಸೇರಿಕೊಂಡು ಆಟವಾಡುತ್ತಿದ್ದನು. ಇದೇ ಸಂದರ್ಭದಲ್ಲಿ ಸಾಧು ಸಿಂಗ್ ಹಾಗೂ ಧರ್ಮೇಂದ್ರ ಸಿಂಗ್ ಅವರ ಕಬ್ಬಿನ ತೋಟಕ್ಕೆ ಯಾದವ್ ಮನೆಯ ಎಮ್ಮೆ ನುಗ್ಗಿದೆ. ಹೀಗೆ ತೋಟಕ್ಕೆ ನುಗ್ಗಿದ ಎಮ್ಮೆಯನ್ನು ಸಾಧು ಹಾಗೂ ಧರ್ಮೇಂದ್ರ ಸಿಂಗ್ ಹಿಡಿದಿದ್ದು, ಯಾದವ್ ಮನೆಗೆ ವಾಪಸ್ ಮಾಡಲು ನಿರಾಕರಿಸಿದ್ದಾರೆ. ಅಲ್ಲದೆ ಸಹೋದರರಿಬ್ಬರು ಯಾದವ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ.
ಜಗಳ ತಾರಕಕ್ಕೇರುತ್ತಿದ್ದಂತೆಯೇ ಸಾಧು, ಧರ್ಮೇಂದ್ರ ಹಾಗೂ ಮಗ ಭೂಪಿಂದರ್ ಸೇರಿಕೊಂಡು ಯಾದವ್ ಮೇಲೆ ಕೋಲಿನಿಂದ ಹಲ್ಲೆ ನಡೆಸಲು ಪ್ರಾರಂಭಿಸಿದ್ದಾರೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಯಾದವ್ ಪ್ರಜ್ಞಾಹೀನನಾಗಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ಈ ವೇಳೆ ಮೂವರು ಆರೋಪಿಗಳೂ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಇತ್ತ ಯಾದವ್ ತಂದೆ ಮಹೇಶ್ ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡ ಮಗನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕನ ಸ್ಥಿತಿ ಗಂಭೀರವಾಗಿದ್ದಿದ್ದನ್ನು ಅರಿತು ಹೆಚ್ಚಿನ ಚಿಕಿತ್ಸೆಗಾಗಿ ಬರೇಲಿಯ ಆಸ್ಪತ್ರೆಗೆ ಕರೆದುಕೊಯ್ಯಲು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕನನ್ನು ಕರೆದುಕೊಂಡು ಹೋಗಲಾಯಿತಾದರೂ ಮಾರ್ಗ ಮಧ್ಯೆಯೇ ಆತ ಮೃತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಜಗ್ನಾರಾಯರ್ನ ಪಾಂಡೆ ತಿಳಿಸಿದ್ದಾರೆ.