ಬೆಂಗಳೂರು: ಬಕ್ರೀದ್ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆ ಹತ್ತಾರು ಗೋವುಗಳನ್ನು ಬಲಿ ಕೊಡಲು ಸಿಲಿಕಾನ್ ಸಿಟಿಗೆ ತರಲಾಗಿದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಹಾಗಾಗಿ ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿಯ ಗಲ್ಲಿ, ಗಲ್ಲಿಗಳಲ್ಲಿ ಮನೆಮುಂದೆ ಕಟ್ಟಿಹಾಕಿದ್ದ ನೂರಾರು ಗೋವುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ವಯಸ್ಸಾಗಿರುವ ಎತ್ತುಗಳು ಮತ್ತು ಎಮ್ಮೆಗಳನ್ನು ಮಾತ್ರ ವಧೆ ಮಾಡಲು ರಾಜ್ಯದಲ್ಲಿ ಅವಕಾಶವಿದೆ. ಆದರೆ ನಗರದ ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿಯಲ್ಲಿ ಕಾನೂನು ಉಲ್ಲಂಘಿಸಿ, ಪೊಲೀಸರ ಕಣ್ತಪ್ಪಿಸಿ ಹತ್ತಾರು ಗೋವುಗಳನ್ನು ತಂದು ಮನೆ ಮುಂದೆ ಕಟ್ಟಿಕೊಂಡಿದ್ದಾರೆ. ದೇವರ ಜೀವನಹಳ್ಳಿಯ ಗಲ್ಲಿ, ಗಲ್ಲಿಗಳಲ್ಲಿ ಮನೆ ಮುಂದೆ ಎತ್ತುಗಳನ್ನು ತಂದು ಕಟ್ಟಿ ಹಾಕಿರುವ ಬಗ್ಗೆ ಸ್ವಯಂ ಸೇವಾ ಸಂಘಟನೆಯ ಸದಸ್ಯರೊಬ್ಬರು ದೂರು ಕೊಟ್ಟಿದ್ದರು. ಇದರ ಅನ್ವಯ ಕಾರ್ಯಚರಣೆಗೆ ಇಳಿದ ಪೊಲೀಸರು ಬಕ್ರೀದ್ ಹಬ್ಬಕ್ಕೆಂದು ಕಡಿಯಲು ತಂದಿದ್ದ ನೂರಾರು ಎತ್ತುಗಳು, ಹಸುಗಳನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಮೇಲ್ಮನೆಯಲ್ಲೂ ಗೋಹತ್ಯೆ ನಿಷೇಧ ಬಿಲ್ ಅಂಗೀಕಾರ – ವಿಪಕ್ಷಗಳಿಂದ ಗದ್ದಲ, ಬಿಜೆಪಿ ಸದಸ್ಯರ ಸಂಭ್ರಮ
ಗೋವುಗಳನ್ನು ರಕ್ಷಣೆ ಮಾಡಿದ ಪೊಲೀಸರು, ಸ್ಟೇಷನ್ ಬಳಿ ತಂದಿದ್ದಾರೆ. ಸದ್ಯ ಗೋವುಗಳ ರಕ್ಷಣೆ ಮಾಡಲಾಗಿದ್ದು ಅನಾಮಧೇಯ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದ್ದು, ಗೋವುಗಳನ್ನು ವಧೆ ಮಾಡಲು ತಂದವರ ಹುಡುಕಾಟ ನಡೆಯುತ್ತಿದೆ.