ಸುಮಾರು 108 ದಿನಗಳ ದೀರ್ಘ ಭಯಾನಕ ಯುದ್ಧಕ್ಕೆ ಕೊನೆಗೂ ಅಮೆರಿಕ ಮತ್ತು ಇರಾನ್ (US-Iran Deal) ಅಂತ್ಯ ಹಾಡಿವೆ. ಶಾಂತಿ ಒಪ್ಪಂದದ ಅಧಿಕೃತ ಮುದ್ರೆ ಕೂಡ ಬಿದ್ದಿದೆ. ಈ ಯುದ್ಧದಿಂದ ಬಿಕ್ಕಟ್ಟುಗಳನ್ನು ಎದುರಿಸಿದ್ದ ಭಾರತದಂತಹ (India) ಅನೇಕ ರಾಷ್ಟ್ರಗಳು ನಿಟ್ಟುಸಿರು ಬಿಡುವಂತಾಗಿದೆ. ಯುದ್ಧ ಅಂತ್ಯಗೊಂಡಿದ್ದು, ಶೀಘ್ರವೇ ಹಾರ್ಮುಜ್ ಜಲಸಂಧಿ (Strait of Hormuz) ಸಂಪೂರ್ಣವಾಗಿ ಹಡಗುಗಳಿಗೆ ಮುಕ್ತವಾಗಲಿದೆ ಎಂಬ ಘೋಷಣೆ ಹೊರಬೀಳುತ್ತಿದ್ದಂತೆ ಎಲ್ಲೆಡೆ ಸಂಭ್ರಮ ಮನೆ ಮಾಡಿತು. ದಾಖಲೆಯ ಏರಿಕೆ ಕಂಡಿದ್ದ ತೈಲ (Crude Oil) ಬೆಲೆ ಕುಸಿಯಿತು. ಷೇರು ಮಾರುಕಟ್ಟೆ ಮೇಲೆದ್ದಿತು. ಇಷ್ಟೆಲ್ಲಾ ಒಳ್ಳೆ ಬೆಳವಣಿಗೆಯಾದರೂ, ಅನಿಶ್ಚಿತತೆ ಹಾಗೆಯೇ ಇದೆ. ಯುದ್ಧದ ಕೆಂಡದ ಕಿಡಿ ಇನ್ನೂ ಆರಿಲ್ಲ. ಈ ಹೊತ್ತಿನಲ್ಲೇ ಭಾರತದಲ್ಲಿ ಜನರು ಪೆಟ್ರೋಲ್, ಡೀಸೆಲ್ ಮತ್ತು ಅನಿಲ ದರ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಯುದ್ಧ ಅಂತ್ಯಗೊಂಡರೂ ಇಂಧನ ಬೆಲೆ ಏಕೆ ಇಳಿಕೆಯಾಗಿಲ್ಲ ಎಂದು ಕೇಳಲಾಗುತ್ತಿದೆ.
ಸಂಘರ್ಷ ಮುಗಿದಿದೆ. ಎರಡೂ ದೇಶಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಆದರೆ, ಈ ಒಪ್ಪಂದದ ಪ್ರಕ್ರಿಯೆ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲು ಒಂದೆರಡು ತಿಂಗಳುಗಳೇ ಬೇಕಾಗುತ್ತದೆ. ಈ ಇಕ್ಕಟ್ಟಿನ ಸನ್ನಿವೇಶದಲ್ಲಿ ಭಾರತದ ಪರಿಸ್ಥಿತಿ ಹೇಗಿದೆ? ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ದರ ಇಳಿಕೆ ಆಗುತ್ತಾ? ಹಾರ್ಮುಜ್ನಿಂದ ವ್ಯಾಪಾರ ವಹಿವಾಟು ಸುಗಮವಾಗಿ ಆಗುತ್ತಾ ಎಂಬ ಪ್ರಶ್ನೆಗಳು ವ್ಯಕ್ತವಾಗಿವೆ. ಆ ಬಗ್ಗೆ ವಿವರ ಇಲ್ಲಿದೆ.
14 ಅಂಶಗಳ ಕರಡು ಒಪ್ಪಂದ
ಯುದ್ಧ ಅಂತ್ಯಗೊಳಿಸುವ ಸಂಬಂಧ ಅಮೆರಿಕ ಮತ್ತು ಇರಾನ್ ನಡುವೆ 14 ಅಂಶಗಳ ಕರಡು ಒಪ್ಪಂದ ಆಗಿದೆ. ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣವೇ ಎಲ್ಲ ರೀತಿಯ ಯುದ್ಧ ನಿಲ್ಲಬೇಕು, 60 ದಿನಗಳ ಒಳಗೆ ಅಂತಿಮ ಶಾಂತಿ ಒಪ್ಪಂದದ ರೂಪುರೇಷೆ ಪೂರ್ಣಗೊಳ್ಳಬೇಕು, ಇರಾನ್ ಬಂದರುಗಳ ಮೇಲಿನ ದಿಗ್ಭಂದನವನ್ನು 10 ದಿನಗಳ ಒಳಗಾಗಿ ಅಮೆರಿಕ ತೆರವು ಮಾಡಬೇಕು, ಇರಾನ್ ಅಣ್ವಸ್ತ್ರಗಳನ್ನು ತಯಾರಿಸುವುದಿಲ್ಲ, ಅಂತಿಮ ಒಪ್ಪಂದದವರೆಗೂ ಇರಾನ್ ಪರಮಾಣು ಯೋಜನೆ ಮುಂದುವಿರಿಸುತ್ತದೆ, ಮುಟ್ಟುಗೋಲು ಹಾಕಿಕೊಂಡಿರುವ ಇರಾನ್ ಆಸ್ತಿ ಮತ್ತು ಹಣ ಬಿಡುಗಡೆ ಮಾಡಲಾಗುವುದು ಅಂತ ಅಮೆರಿಕ ಹೇಳಿದೆ ಹೀಗೆ ಪ್ರಮುಖ 14 ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ. ಇದನ್ನೂ ಓದಿ: ಒಪ್ಪಂದ ಉಲ್ಲಂಘಿಸಿದರೆ ಮತ್ತೆ ಬಾಂಬ್ ದಾಳಿ – ಶಾಂತಿ ಒಪ್ಪಂದದ ಬೆನ್ನಲ್ಲೇ ಟ್ರಂಪ್ ವಾರ್ನಿಂಗ್

ಜೂ.19 ರಂದು ಅಧಿಕೃತ ಮುದ್ರೆ
ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಒಪ್ಪಂದಕ್ಕೆ ಜೂ.19 (ಶುಕ್ರವಾರ) ಅಧಿಕೃತ ಮುದ್ರೆ ಬಿದ್ದಿದೆ. ಸಹಿ ಆದ ಬೆನ್ನಲ್ಲೇ ಒಪ್ಪಂದದ ಅನುಸಾರ ಎಲ್ಲಾ ಕ್ರಮಗಳು ಜಾರಿಗೊಳ್ಳಲಿವೆ. ಹಾರ್ಮುಜ್ ಜಲಸಂಧಿ ಕೂಡ ಸಂಪೂರ್ಣವಾಗಿ ಮುಕ್ತವಾಗಲಿದೆ. ಒಪ್ಪಂದಕ್ಕೆ ಎರಡೂ ದೇಶಗಳು ಸ್ವಿಜರ್ಲೆಂಡ್ನಲ್ಲಿ ಸಹಿ ಹಾಕಿವೆ. ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ಕುರಿತು ಅಮೆರಿಕ, ಇರಾನ್, ಪಾಕಿಸ್ತಾನ ಮತ್ತು ಕತಾರ್ ಜೊತೆ ನಿಕಟ ಸಂವಹನ ನಡೆಸಿರುವುದಾಗಿ ಸ್ವಿಸ್ ವಿದೇಶಾಂಗ ಸಚಿವಾಲಯ ಘೋಷಿಸಿತ್ತು. ಈ ಒಪ್ಪಂದವು ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದೆ.
60 ದಿನಗಳ ಮಾತುಕತೆ
ಈಗ ಪ್ರಕಟವಾಗಿರುವುದು ಅಂತಿಮ ಶಾಂತಿ ಒಪ್ಪಂದ ಅಲ್ಲ. ಇದು 60 ದಿನಗಳ ಮಾತುಕತೆ ಅವಧಿಯನ್ನು ರೂಪಿಸುವ ತಿಳುವಳಿಕೆ ಪತ್ರವಾಗಿದೆ. ಈ ಅವಧಿಯಲ್ಲಿ ಉಭಯ ದೇಶಗಳು ಸಮಗ್ರ ಶಾಂತಿ ಒಪ್ಪಂದದ ಕರಡು ರೂಪಿಸಲಿವೆ. ‘ಈ ಒಪ್ಪಂದವು ಯುದ್ಧಕ್ಕೆ ತಕ್ಷಣದ ಅಂತ್ಯ ತರುತ್ತದೆ. ಅಂತಿಮ ಒಪ್ಪಂದಕ್ಕಾಗಿ ಮುಂದಿನ 2 ತಿಂಗಳೊಳಗೆ ಮಾತುಕತೆ ಆರಂಭವಾಗಲಿದೆ’ ಎಂದು ಇರಾನ್ ಉಪ ವಿದೇಶಾಂಗ ಸಚಿವರು ತಿಳಿಸಿದ್ದಾರೆ. ಮುಂದಿನ ಎರಡು ತಿಂಗಳುಗಳಲ್ಲಿ ನಡೆಯುವ ಮಾತುಕತೆಗಳು ಒಪ್ಪಂದಕ್ಕೆ ಅಂತಿಮ ಕಾರ್ಯಸಾಧ್ಯವಾದ ಆಕಾರವನ್ನು ನೀಡುತ್ತವೆ.
ಕಚ್ಚಾ ತೈಲ ಬೆಲೆ ಇಳಿಕೆ
ಭಾರತದ ತೈಲ ಸಂಸ್ಕರಣಾಗಾರಗಳ ಸಂಸ್ಕರಣಾ ವೆಚ್ಚದ ಮೇಲೆ ಪರಿಣಾಮ ಬೀರುವ ಇಂಡಿಯನ್ ಬಾಸ್ಕೆಟ್ ಕಚ್ಚಾ ತೈಲ ಬೆಲೆಗಳು ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬ್ಯಾರೆಲ್ಗೆ 106-114 ಡಾಲರ್ ವ್ಯಾಪ್ತಿಯಲ್ಲಿತ್ತು. ಶಾಂತಿ ಒಪ್ಪಂದದ ಘೋಷಣೆ ಹೊರಬೀಳುತ್ತಿದ್ದಂತೆ ಬೆಲೆಗಳು ಇಳಿಕೆಯತ್ತ ಸಾಗುತ್ತಿವೆ. ಜನವರಿಯಲ್ಲಿ 63 ಡಾಲರ್ ಮತ್ತು ಫೆಬ್ರವರಿಯಲ್ಲಿ 69 ಡಾಲರ್ ಸರಾಸರಿ ಬೆಲೆಯಿತ್ತು. ಯುದ್ಧ ಆರಂಭವಾದ ಬೆನ್ನಲ್ಲೇ ಇದು ತೀವ್ರ ಏರಿಕೆ ಕಂಡಿತ್ತು. ಈಗ ಸೋಮವಾರ ಯುಎಸ್-ಇರಾನ್ ಶಾಂತಿ ಒಪ್ಪಂದದ ಸುದ್ದಿ ಪ್ರಕಟವಾದ ನಂತರ ಇಂಡಿಯನ್ ಬಾಸ್ಕೆಟ್ ಕಚ್ಚಾ ತೈಲ ಬೆಲೆ ಬ್ಯಾರೆಲ್ಗೆ 83 ಡಾಲರ್ಗೆ ಇಳಿದಿದೆ.

ಪೆಟ್ರೊಲ್-ಡೀಸೆಲ್ ಬೆಲೆ ಇಳಿಯುತ್ತಾ?
ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಯಿತು. ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದರಿಂದ ತೈಲ ಬಿಕ್ಕಟ್ಟು ಎದುರಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯೂ ಏರಿಕೆ ಕಂಡಿತು. ದೇಶದಲ್ಲಿ ಮೇ 15 ರಿಂದ 25ರ ಅವಧಿಯಲ್ಲಿ ನಾಲ್ಕು ಬಾರಿ ಇಂಧನ ಬೆಲೆ ಏರಿತು. ಪ್ರಸ್ತುತ ಉಭಯ ದೇಶಗಳ ನಡುವೆ ಶಾಂತಿ ಒಪ್ಪಂದ ಘೋಷಣೆ ಆಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ 5% ನಷ್ಟು ಕುಸಿತು ಕಂಡಿದೆ. ಹೀಗಾಗಿ, ಭಾರತದಲ್ಲೂ ಇಂಧನ ದರ ಇಳಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಆದರೆ, ಮುಂದಿನ ಕೆಲವು ತಿಂಗಳುಗಳ ವರೆಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗುವುದು ಅನುಮಾನ ಎಂದು ತಜ್ಞರು ತಿಳಿಸಿದ್ದಾರೆ. ಏಕೆಂದರೆ, ಭಾರತದ ತೈಲ ಮಾರಾಟ ಸಂಸ್ಥೆಗಳು ಈಗಾಗಲೇ ಮುಂಬರುವ 2 ತಿಂಗಳ ಪೂರೈಕೆಗೆ ಅಗತ್ಯವಿರುವಷ್ಟು ಕಚ್ಚಾ ತೈಲವನ್ನು ಹಳೆಯ ಮುಂಗಡ ದರದಲ್ಲೇ ಖರೀದಿಸಿವೆ. ಆದ್ದರಿಂದ ಸದ್ಯಕ್ಕೆ ಹೊಸ ಇಳಿಕೆಯ ದರ ಅನ್ವಯವಾಗುವುದಿಲ್ಲ. ಜಾಗತಿಕ ಇಂಧನ ಪರಿಸ್ಥಿತಿಯು ಯುದ್ಧಗಳು ಪ್ರಾರಂಭವಾಗುವ ಮೊದಲಿದ್ದ ಹಂತಕ್ಕೆ ಮರಳಲು ಇನ್ನೂ ಕೆಲವು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು. ಇದನ್ನೂ ಓದಿ: 28,350 ಕೋಟಿ ಪರಿಹಾರ, ಇರಾನ್ ಮೇಲಿನ ನಿರ್ಬಂಧ ತೆರವು – 14 ಅಂಶಗಳ ಶಾಂತಿ ಒಪ್ಪಂದಕ್ಕೆ ಅಮೆರಿಕ-ಇರಾನ್ ಸಹಿ
ಭಾರತಕ್ಕೆ ಆರ್ಥಿಕ ತಜ್ಞರ ಸಲಹೆ ಏನು?
ಜಾಗತಿಕ ಅನಿಶ್ಚಿತತೆ ಸಂದರ್ಭದಲ್ಲಿ ಭಾರತ ಹಲವು ಬಿಕ್ಕಟ್ಟನ್ನು ಎದುರಿಸುವಂತಾಗಿದೆ. ಅಮೆರಿಕ-ಇರಾನ್ ಶಾಂತಿ ಒಪ್ಪಂದವು ಭಾರತಕ್ಕೆ ತಾತ್ಕಾಲಿಕ ತೃಪ್ತಿ ನೀಡಿರಬಹುದು. ಆದರೆ, ಮುಂದೆ ಇಂತಹ ಸನ್ನಿವೇಶಗಳು ದೇಶಕ್ಕೆ ಬಿಕ್ಕಟ್ಟನ್ನು ಮತ್ತಷ್ಟು ಭೀಕರಗೊಳಿಸಬಹುದು. ಇದರ ಬಗ್ಗೆ ಸರ್ಕಾರ ಗಮನ ಕೊಡಬೇಕೆಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮುಖ್ಯವಾಗಿ ದೇಶ ಎರಡು ಅಂಶಗಳ ಕಡೆ ಗಮನ ಕೇಂದ್ರೀಕರಿಸಬೇಕು ಎಂದಿದ್ದಾರೆ.
1) ತೈಲ: ಒಂದು, ತೈಲ ವಲಯಕ್ಕೆ ನಿರಂತರ ಗಮನ ಬೇಕು. ದೇಶದ ಕಚ್ಚಾ ತೈಲ ನಿಕ್ಷೇಪಗಳಲ್ಲಿ ಶೇ. 22 ಕ್ಕಿಂತ ಹೆಚ್ಚು ಮತ್ತು ಅನಿಲ ನಿಕ್ಷೇಪಗಳಲ್ಲಿ ಶೇ. 15 ರಷ್ಟು ಹೊಂದಿರುವ ಈಶಾನ್ಯದಲ್ಲಿ ತೈಲ ನಿಕ್ಷೇಪಗಳಲ್ಲಿ ತ್ವರಿತ ಕೊರೆಯುವಿಕೆ ನಡೆಯಬೇಕಿದೆ. ಅದಕ್ಕಾಗಿ ಅಸ್ಸಾಂ, ನಾಗಾಲ್ಯಾಂಡ್ ಮತ್ತು ಕೇಂದ್ರ ಸರ್ಕಾರದ ನಡುವಿನ ತ್ರಿಪಕ್ಷೀಯ ಒಪ್ಪಂದ ಆಗಬೇಕು. ಏಕೆಂದರೆ, ಭಾರತದ ಕಚ್ಚಾ ತೈಲ ಆಮದಿನ ಮೇಲಿನ ಅವಲಂಬನೆಯು 2014-15ರಲ್ಲಿ ಶೇ. 84 (ಅದರ ಬಳಕೆಯ) ದಿಂದ 2025-26ರಲ್ಲಿ ಶೇ. 90 ಕ್ಕೆ ಏರಿದೆ. ಸಹಜವಾಗಿಯೇ, ಬೆಳೆಯುತ್ತಿರುವ ಆರ್ಥಿಕತೆಯು ಕಚ್ಚಾ ತೈಲಕ್ಕೆ ಹೆಚ್ಚಿನ ಬೇಡಿಕೆಗೆ ಕಾರಣವಾಗಿದೆ. ಆದರೆ, ಆಮದು ಅವಲಂಬನೆ ಹೆಚ್ಚಾಗಲು ಕಾರಣವೆಂದರೆ, ಈ ಅವಧಿಯಲ್ಲಿ ದೇಶೀಯ ಉತ್ಪಾದನೆಯಲ್ಲಿ ತೀವ್ರ ಕುಸಿತವಾಗಿರುವುದು. 2014-15ರಲ್ಲಿ 36 ಮಿಲಿಯನ್ ಟನ್ಗಳಿಂದ 2025-26ರಲ್ಲಿ 26 ಮಿಲಿಯನ್ ಟನ್ಗಳಿಗೆ ಇಳಿಕೆ ಕಂಡಿದೆ. ನೈಸರ್ಗಿಕ ಅನಿಲದ ಆಮದು ಕೂಡ ಹೆಚ್ಚಾಗಿದೆ. ಅದೇ ಅವಧಿಯಲ್ಲಿ ದೇಶೀಯ ಬಳಕೆಯಲ್ಲಿ ಅದರ ಪಾಲು ಸುಮಾರು ಶೇ. 40 ರಿಂದ ಶೇ. 50 ಕ್ಕಿಂತ ಹೆಚ್ಚಾಗಿದೆ.

ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ಹೊಸ ನೀತಿಗಳನ್ನು ಜಾರಿಗೆ ತಂದಿತು. ಅವು ಅನಿಲ ಉತ್ಪಾದನೆಯಲ್ಲಿ ಒಂದಷ್ಟು ಫಲಿತಾಂಶಗಳನ್ನು ನೀಡಿತು. ಆದರೆ, ವೆಚ್ಚ-ಚೇತರಿಕೆ ಆಧಾರಿತ ಹೊಸ ಪರಿಶೋಧನಾ ಪರವಾನಗಿ ನೀತಿ (ಎನ್ಇಎಲ್ಪಿ) ಯಿಂದ ಹೆಚ್ಚು ಹೂಡಿಕೆದಾರ ಸ್ನೇಹಿ ಹೈಡ್ರೋಕಾರ್ಬನ್ ಪರಿಶೋಧನೆ ಮತ್ತು ಪರವಾನಗಿ ನೀತಿಗೆ ನೀತಿ ಬದಲಾವಣೆಯ ಹೊರತಾಗಿಯೂ ತೈಲ ಉತ್ಪಾದನೆಯು ದಕ್ಷಿಣದ ದಿಕ್ಕನ್ನು ಕಾಯ್ದುಕೊಂಡಿತು. ವಾಹನಗಳಿಗೆ ಎಥೆನಾಲ್ ಆಧಾರಿತ ಇಂಧನದ ಹೆಚ್ಚಿನ ಬಳಕೆಯನ್ನು ಪ್ರೋತ್ಸಾಹಿಸುವಲ್ಲಿ ಪೆಟ್ರೋಲಿಯಂ ಸಚಿವಾಲಯದ ಇತ್ತೀಚಿನ ಉಪಕ್ರಮಗಳು ಸ್ವಾಗತಾರ್ಹ. ಆದರೆ, ಅದು ಕಚ್ಚಾ ತೈಲ ಮತ್ತು ಅನಿಲದ ದೇಶೀಯ ಉತ್ಪಾದನೆಯನ್ನು ಸಮಾನ ಉತ್ಸಾಹದಿಂದ ಹೆಚ್ಚಿಸಲು ತನ್ನ ಚಾಲನೆಯನ್ನು ಹೆಚ್ಚಿಸಬೇಕು.
2) ತೆರಿಗೆ ಕ್ರಮಗಳು: ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ನಂತರ ತೆಗೆದುಕೊಂಡ ವಿವಿಧ ಕ್ರಮಗಳಿಂದಾಗಿ ಹೆಚ್ಚುವರಿ ವಾರ್ಷಿಕ ವೆಚ್ಚದ ಹೊರೆ ಸುಮಾರು 4 ಟ್ರಿಲಿಯನ್ ರೂ.ಗೆ (4 ಲಕ್ಷ ಕೋಟಿ ರೂ.) ಏರಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಕಡಿತದಿಂದಾಗಿ 1 ಟ್ರಿಲಿಯನ್ ರೂ. (1 ಲಕ್ಷ ಕೋಟಿ ರೂ.) ಹೆಚ್ಚುವರಿ ಹೊರೆ, ಆರ್ಥಿಕ ಸ್ಥಿರೀಕರಣ ನಿಧಿಗೆ 1 ಟ್ರಿಲಿಯನ್ ರೂ. ಹಂಚಿಕೆ, ರಸಗೊಬ್ಬರ ಸಬ್ಸಿಡಿ ಹೊರೆ 1.7 ಟ್ರಿಲಿಯನ್ ರೂ. ಹೆಚ್ಚುವರಿ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆಗೆ 18,000 ಕೋಟಿ ರೂ. ಹಂಚಿಕೆ ಸೇರಿವೆ. ಇತರ ಕೆಲವು ಶೀರ್ಷಿಕೆಗಳ ಅಡಿಯಲ್ಲಿನ ವೆಚ್ಚ ಉಳಿತಾಯದೊಂದಿಗೆ ಹೊಂದಿಕೆಯಾಗದಿದ್ದರೆ, ಹೆಚ್ಚುವರಿ ವೆಚ್ಚದ ಹೊರೆಯು ಕೇಂದ್ರ ಸರ್ಕಾರದ ಹಣಕಾಸಿನ ಕೊರತೆಯನ್ನು ಒಟ್ಟು ದೇಶೀಯ ಉತ್ಪನ್ನದ (GDP) ಸುಮಾರು ಶೇ. 5.3 ಕ್ಕೆ ಹೆಚ್ಚಿಸುತ್ತದೆ. ಇದು ಬಜೆಟ್ನಲ್ಲಿ ನಿಗದಿಪಡಿಸಲಾದ ಶೇ. 4.3 ರಷ್ಟಿದೆ. ಆದ್ದರಿಂದ, ತೆರಿಗೆ ಕ್ರಮಗಳ ಮೂಲಕ ಆದಾಯವನ್ನು ಹೆಚ್ಚಿಸುವುದು ಅಥವಾ ಇತರ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂಬುದು ತಜ್ಞರ ಸಲಹೆ. ಇದನ್ನೂ ಓದಿ:
ತೈಲ ಕಂಪನಿಗಳು ಚಿಲ್ಲರೆ ಬೆಲೆಗಳನ್ನು ಹೆಚ್ಚಿಸಲು ಸಾಧ್ಯವಾಗದ ಕಾರಣ, ಕಚ್ಚಾ ತೈಲದ ಬೆಲೆ ಏರಿಕೆಯಿಂದ ಉಂಟಾಗುವ ಪರಿಣಾಮವನ್ನು ತಗ್ಗಿಸಲು ಕೇಂದ್ರ ಸರ್ಕಾರವು ಮಾರ್ಚ್ 26 ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್ಗೆ 10 ರೂ.ಗಳಷ್ಟು ಕಡಿತಗೊಳಿಸಿತು. ಈ ಕ್ರಮವು 2026-27ರಲ್ಲಿ ವಾರ್ಷಿಕ 1 ಟ್ರಿಲಿಯನ್ ರೂ.ಗಳಷ್ಟು ಆದಾಯ ನಷ್ಟವನ್ನು ಸೂಚಿಸುತ್ತದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಕುಸಿಯುತ್ತಿದ್ದಂತೆ, ಕೇಂದ್ರ ಹಣಕಾಸು ಸಚಿವಾಲಯವು ವಿಶೇಷ ಹೆಚ್ಚುವರಿ ಅಬಕಾರಿ ಸುಂಕದಲ್ಲಿನ ಕಡಿತವನ್ನು ಹಿಂಪಡೆಯಬೇಕು. ಹಣಕಾಸು ವ್ಯವಸ್ಥೆಯ ಮೇಲಿನ ಹೊಡೆತವನ್ನು ಕಡಿಮೆ ಮಾಡಬೇಕು ಎಂದು ತಜ್ಞರು ತಿಳಿಸಿದ್ದಾರೆ.
2014-15 ಮತ್ತು 2025-26 ರ ನಡುವೆ, ಇಂಡಿಯನ್ ಬಾಸ್ಕೆಟ್ ಕಚ್ಚಾ ತೈಲದ ವಾರ್ಷಿಕ ಸರಾಸರಿ ಬೆಲೆ ಬ್ಯಾರೆಲ್ಗೆ 46 ಡಾಲರ್ನಿಂದ 93 ಡಾಲರ್ ವರೆಗೆ ಇತ್ತು. ಈ ಆರು ವರ್ಷಗಳು ಹಿಂದಿನ ವರ್ಷಕ್ಕಿಂತ ವಾರ್ಷಿಕ ಸರಾಸರಿ ಬೆಲೆಯಲ್ಲಿ ಕುಸಿತವನ್ನು ದಾಖಲಿಸಿವೆ. ಆದಾಗ್ಯೂ, ಸಾಧಾರಣ ಬೆಲೆಗಳ ಆ ಅವಧಿಯನ್ನು ಹಣಕಾಸು ಇಲಾಖೆಯ ಮೇಲಿನ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡಲು ಅಥವಾ ತೈಲದಲ್ಲಿ ಸ್ವಾವಲಂಬನೆಯನ್ನು ಸುಧಾರಿಸಲು ನೀತಿ ಪರಿಹಾರಗಳನ್ನು ಜಾರಿಗೆ ತರಲು ಬಳಸಿಕೊಳ್ಳಲಾಗಿಲ್ಲ. ಮುಂಬರುವ ತಿಂಗಳುಗಳಲ್ಲಿ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ನಿರೀಕ್ಷಿತ ಮೃದುತ್ವವು ಸರ್ಕಾರವನ್ನು ಮತ್ತೆ ನೀತಿ ಜಡತ್ವ ಅಥವಾ ನಿಷ್ಕ್ರಿಯತೆಗೆ ತಳ್ಳಬಾರದು ಎಂಬುದು ಆರ್ಥಿಕ ತಜ್ಞರ ಕಿವಿಮಾತಾಗಿದೆ.
