ಚಿಕ್ಕಬಳ್ಳಾಪುರ: ಕೊರೊನಾ ಆತಂಕ ಹಾಗೂ ಕೊರೊನಾ ಸೋಂಕು ನಿಯಂತ್ರಣ ಮಾಡುವ ಸಲುವಾಗಿ ಜಿಲ್ಲೆಯ ವಿಶ್ವವಿಖ್ಯಾತ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮವನ್ನ ಮತ್ತೆ ಲಾಕ್ ಡೌನ್ ಮಾಡಿರುವುದಾಗಿ ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್ ಆದೇಶ ಹೊರಡಿಸಿದ್ದಾರೆ.
ಅನ್ ಲಾಕ್ ಆಗಿದ್ದ ಕಳೆದ ವೀಕೆಂಡ್ ನಲ್ಲಿ ಸಾವಿರಾರು ಮಂದಿ ಪ್ರವಾಸಿಗರು ನಂದಿಗಿರಿಧಾಮಕ್ಕೆ ಆಗಮಿಸಿದ್ದರು. ಸಾವಿರಾರು ವಾಹನಗಳ ಆಗಮನದ ಹಿನ್ನೆಲೆ ಸಂಚಾರ ದಟ್ಟಣೆ ಹಾಗೂ ಪ್ರಮುಖವಾಗಿ ಕೊರೊನಾ ನಿಯಮಗಳ ಪಾಲನೆ ಮಾಡದೇ ಬಹುತೇಕ ಪ್ರವಾಸಿಗರು ನಿರ್ಲಕ್ಷ್ಯ ವಹಿಸಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಎಸ್ಪಿ ಮಿಥುನ್ ಕುಮಾರ್ ಜಿಲ್ಲಾಡಳಿತಕ್ಕೆ ನಂದಿಬೆಟ್ಟದಲ್ಲಿ ಪ್ರವಾಸಿಗರ ಆಗಮನ ಹೆಚ್ಚಾಗಿದ್ದು, ಸಿಬ್ಬಂದಿ ನಿಯೋಜನೆ ಮಾಡಿದ್ದರೂ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಕೋವಿಡ್ ನಿಯಮಗಳ ಪಾಲನೆ ಮಾಡಲಾಗುತ್ತಿಲ್ಲ. ಹೀಗಾಗಿ ಪ್ರವಾಸಿಗರಿಗೆ ನಿಬಂಧನೆಗಳನ್ನು ವಿಧಿಸಿದರೆ ಸೋಂಕು ನಿಯಂತ್ರಣಕ್ಕೆ ಅನೂಕುಲಕರವಾಗಿರುತ್ತದೆ ಎಂಬುದಾಗಿ ಕೋರಿಕೊಂಡಿದ್ದರು.
ಈ ಕೋರಿಕೆ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಆರೋಗ್ಯ ಸಚಿವ ಸುಧಾಕರ್ ಜೊತೆ ಚರ್ಚಿಸಿ, ನಂದಿಗಿರಿಧಾಮದಲ್ಲಿ ಜನಸಂದಣಿ ತಡೆಯುವುದು ಅತ್ಯವಶ್ಯಕವಾಗಿದೆ ಎಂದು ಮನಗಂಡು, ವೀಕೆಂಡ್ ಶನಿವಾರ-ಭಾನುವಾರ ಕಂಪ್ಲೀಟ್ ಆಗಿ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿಬರ್ಂಧಿಸಿ ಅಪರ ಜಿಲ್ಲಾಧಿಕಾರಿ ಎಚ್ ಅಮರೇಶ್ ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದವರೆಗೂ ಈ ಆದೇಶ ಜಾರಿಯಲ್ಲಿರಲಿದೆ. ಶುಕ್ರವಾರ ಸಂಜೆ 6 ಗಂಟೆಗೆ ನಂದಿಬೆಟ್ಟದ ಬಾಗಿಲು ಬಂದ್ ಆಗಲಿದ್ದು, ಮರಳಿ ಸೋಮವಾರ ಎಂದಿನಂತೆ 6 ಗಂಟೆಗೆ ತೆರೆಯಲಿದೆ. ಇದನ್ನೂ ಓದಿ:1023 ಕಾರು, 425 ಬೈಕ್, 46 ಮಿನಿ ಬಸ್- ಮುಳ್ಳಯ್ಯನಗಿರಿಯಲ್ಲಿ ಫುಲ್ ಟ್ರಾಫಿಕ್ ಜಾಮ್