ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ಆಗುತ್ತಿರುವ ಸದ್ಯದ ಬೆಳವಣಿಗೆ ಕುರಿತಂತೆ ಸಚಿವ ಶಿವರಾಮ್ ಹೆಬ್ಬಾರ್ ಆತಂಕಗೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ಚರ್ಚೆ ನಡೆಸಲು ಕೃಷಿ ಸಚಿವ ಬಿ.ಸಿ ಪಾಟೀಲ್ಗಾಗಿ ತಮ್ಮ ಮನೆಯ ಗೇಟ್ ಬಳಿ ಕಾದು ನಿಂತ ಪ್ರಸಂಗ ನಡೆದಿದೆ.
ನಗರದ ಜೆಸಿ ರಸ್ತೆಯಲ್ಲಿ ಶಿವರಾಮ್ ಹೆಬ್ಬಾರ್ರವರ ಸರ್ಕಾರಿ ನಿವಾಸ ಇದ್ದು, ಅದರ ಪಕ್ಕದಲ್ಲಿಯೇ ಬಿ.ಸಿ ಪಾಟೀಲ್ರವರ ಮನೆ ಕೂಡ ಇದೆ. ಹೀಗಾಗಿ ಮನೆಗೆ ಬೇಗ ಬಾ ನಿನ್ನ ಬಳಿ ಮಾತಾಡಬೇಕು ಎಂದು ಬಿ.ಸಿ.ಪಾಟೀಲ್ ಗೆ ಶಿವರಾಮ್ ಹೆಬ್ಬಾರ್ ಕರೆ ಮಾಡಿ ಕರೆದಿದ್ದಾರೆ. ಈ ವೇಳೆ ನಿಮ್ಮ ಮನೆಗೆ ನೇರವಾಗಿ ಬರುತ್ತೇನೆ ಎಂದು ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಈ ಹಿನ್ನೆಲೆ ಶಿವರಾಮ್ ಹೆಬ್ಬಾರ್ರವರು, ತಮ್ಮ ನಿವಾಸದ ಗೇಟ್ ಬಳಿಯೇ ಆತಂಕದಿಂದ ಕಾದಿದ್ದಾರೆ. ಮಂತ್ರಿ ಸ್ಥಾನದ ಗತ್ತು ಇಲ್ಲ, ಗೈರತ್ತು ಇಲ್ಲ ಎಂಬಂತೆ ಅಕ್ಷರಶಃ ಆತಂಕದಿಂದ ಗೇಟ್ ಬಳಿಯೇ ನಿಂತುಕೊಂಡು ಪದೇ ಪದೇ ರಸ್ತೆ ಕಡೆಯೆ ನೋಡುತ್ತಾ ಕಾಯುತ್ತಾ ನಿಂತಿದ್ದರು. ನಂತರ ಬಿ.ಸಿ ಪಾಟೀಲ್, ಶಿವರಾಂ ಹೆಬ್ಬಾರ್ ನಿವಾಸಕ್ಕೆ ಬರದೇ ಪಕ್ಕದಲ್ಲಿ ಇರುವ ತಮ್ಮ ಸರ್ಕಾರಿ ನಿವಾಸಕ್ಕೆ ನೇರವಾಗಿ ಬಂದಿದ್ದಾರೆ. ಈ ವಿಚಾರ ತಿಳಿದ ಶಿವರಾಂ ಹೆಬ್ಬಾರ್ ಏಕಾಂಗಿಯಾಗಿ ಬಿ.ಸಿ.ಪಾಟೀಲ್ ನಿವಾಸದ ಕಡೆಗೆ ಫುಟ್ ಪಾತ್ ಮೇಲೆ ನಡೆದುಕೊಂಡು ಹೋಗಿದ್ದಾರೆ. ಆತಂಕದಲ್ಲೆ ಬಿ.ಸಿ.ಪಾಟೀಲ್ ನಿವಾಸಕ್ಕೆ ಎಂಟ್ರಿ ಕೊಟ್ಟ ಸಚಿವರು, ಪಾಟೀಲ್ ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಟೆನ್ಷನ್ ಫ್ರೀ ಆದರು.
ನಾಯಕತ್ವ ಬದಲಾವಣೆ ಎಲ್ಲವೂ ಊಹಾಪೋಹ ಅಷ್ಟೇ. ಯಡಿಯೂರಪ್ಪನವರಾಗಲಿ ಹೈಕಮಾಂಡ್ ಆಗಲಿ ಯಾರು ಸಹ ನಾಯಕತ್ಚ ಬದಲಾವಣೆ ಬಗ್ಗೆ ಎಲ್ಲೂ ಹೇಳಿಲ್ಲ. ನಾವು ಸಚಿವರುಗಳು ಊಟಕ್ಕೆ ಸೇರುತ್ತಿರುತ್ತೇವೆ. ನಿನ್ನೆಯು 4-5 ಜನ ಊಟಕ್ಕೆ ಸೇರಿದ್ದೆವು. ನಾಯಕತ್ವ ಬದಲಾವಣೆ ಇಲ್ಲಾ ಎಂದು ರಾಜ್ಯಾಧ್ಯಕ್ಷರೇ ಹೇಳಿದ್ದಾರೆ. ಆದ್ದರಿಂದ ನಮಗೆ ಯಾವುದೇ ಗೊಂದಲ ಇಲ್ಲ. ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮುಂದಾದರೆ ಅದು ಹೈಕಮಾಂಡ್ ತೀರ್ಮಾನ. ನಾವು ಯಡಿಯೂರಪ್ಪ ಹಾಗೂ ಭಾರತೀಯ ಜನತಾಪಾರ್ಟಿಯನ್ನ ನಂಬಿಕೊಂಡು ಬಂದವರು. ಪಕ್ಷಕ್ಕೆ ಬಂದ ಮೇಲೆ ಪಕ್ಷದ ತೀರ್ಮಾನಕ್ಕೆ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ. ಸಿಎಂ ಬದಲಾದರೆ ಸಚಿವ ಸ್ಥಾನ ಕೈ ತಪ್ಪುತ್ತೆ ಎಂಬ ಆತಂಕ ನಮಗಿಲ್ಲ. ಎಲ್ಲವೂ ಮಾಧ್ಯಮಗಳಲ್ಲಿ ಬರುತ್ತಿರುವ ಊಹಪೋಹದ ಸುದ್ದಿ. ಅದರ ಬಗ್ಗೆ ನಾವೇನು ಮಾತನಾಡಲ್ಲ. ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲಾ ಪಕ್ಷ ಹಾಗೂ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ ಎಂದು ಬಿ.ಸಿ.ಪಾಟೀಲ್ ಹಾಗೂ ಶಿವರಾಂ ಹೆಬ್ಬಾರ್ ಜಂಟಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:ನಾನು ಮಂತ್ರಿಯಾಗಬೇಕೆಂದು ಬಿಜೆಪಿಗೆ ಬಂದವನಲ್ಲ: ಮಹೇಶ್ ಕುಮಟಳ್ಳಿ