ನೆಲಮಂಗಲ: ಕೊರೊನಾ ಸೋಂಕಿನ ಮಧ್ಯೆ ತಮ್ಮ ಚಟುವಟಿಕೆಗಳನ್ನ ಮುಂದುವರಿಸಿದ್ದ ಹಾಗೂ ರೌಡಿ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದವರಿಗೆ ಬೆಳಂಬೆಳಗ್ಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ನಗರ ವ್ಯಾಪ್ತಿಯ ಇಪ್ಪತೈದಕ್ಕು ಹೆಚ್ಚು ರೌಡಿಶೀಟರ್ ಗಳಿಗೆ ನೆಲಮಂಗಲ ಟೌನ್ ಪೊಲೀಸರು ಬಿಸಿ ಮುಟ್ಟಿಸಿ ಇತ್ತೀಚಿನ ಚಟುವಟಿಕೆ ಹಾಗೂ ಸ್ವ ವಿವರಗಳ ಮಾಹಿತಿಯನ್ನ ಸಂಗ್ರಹಿಸಿದ್ದಾರೆ. ಇನ್ನೂ ಬಾಲ ಬಿಚ್ಚಿ ಜನರಿಗೆ ತೊಂದರೆ ಕೊಟ್ರೆ ಕಾನೂನು ರೀತಿಯಲ್ಲಿ ಕ್ರಮವನ್ನ ಜರುಗಿಸಲಾಗುವುದು ಎಂದು ನೆಲಮಂಗಲ ಟೌನ್ ಸಿಪಿಐ ಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಈ ವೇಳೆ ಬಂಡೆ ಮಂಜುನಾಥ್, ರಂಗನಾಥ್, ಆಂಟಿ ವೆಂಕಟೇಶ್, ವಂದಲ್ ರವಿ, ಶರವಣ, ಚೇಣಿ ಮೂರ್ತಿ, ಖಾಸೀಮ್, ನಾಗರಾಜು, ಶಿವಕುಮಾರ, ಕಿರಣ, ಉಮೇಶ್ ಸೇರಿದಂತೆ ಅನೇಕರಿಗೆ ವಾರ್ನಿಂಗ್ ನೀಡಲಾಯಿತು. ಇದನ್ನೂ ಓದಿ: ಯಡಿಯೂರಪ್ಪ ಒಂದೊತ್ತಿನ ಊಟಕ್ಕೂ ಕಷ್ಟಪಟ್ಟಂತಹ ವ್ಯಕ್ತಿ: ಸ್ನೇಹಿತ ರಾಮಸ್ವಾಮಿ
ಒಬ್ಬ ಪೊಲೀಸ್ ಪೇದೆ ಮನೆಗೆ ಬಂದರೂ ಗೌರವಯುತವಾಗಿ ಮಾಹಿತಿ ಕೊಡಬೇಕು. ಪೇದೆ ಅಂತ ಬಾಲ ಬಿಚ್ಚಿದ್ರೆ ಇಡೀ ಪೊಲೀಸರ ತಂಡ ಬರುತ್ತೆ ಎಂದು ಎಚ್ಚರಿಕೆ, ಸರಿಯಾದ ದಾರಿಯಲ್ಲಿ ನಡೆಯಬೇಕು, ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಜೀವನ ನಡೆಸುವಂತೆ ಬುದ್ಧಿ ಮಾತನ್ನ ಹೇಳಿದರು.
ಇದೇ ವೇಳೆಗೆ ರೌಡಿಶೀಟರ್ ಗಳ ಆರೋಗ್ಯ ವಿಚಾರಿಸಿ ಕೊರೊನಾ ಸೋಂಕಿನ ಬಗ್ಗೆಯೂ ಜಾಗೃತಿ ಮೂಡಿಸಿದರು. ಈ ವೇಳೆ ಪಿಎಸ್ಐ ಸುರೇಶ್, ಟೌನ್ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.