ಧಾರವಾಡ: ಜಿಲ್ಲೆಯಲ್ಲಿ ಇಂದು ಸುರಿದ ಧಾರಾಕಾರ ಮಳೆಗೆ ಧಾರವಾಡ ತಾಲೂಕಿನ ಹಾರೋಬೆಳವಡಿ ಹಾಗೂ ಆಯಟ್ಟಿ ಗ್ರಾಮದ ಮಧ್ಯೆ ಇರುವ ತುಪ್ಪರಿ ಹಳ್ಳಕ್ಕೆ ಸಿಲುಕಿ ರೈತ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಹಾರೋಬೆಳವಡಿ ಗ್ರಾಮದ ರೈತ ಮಡಿವಾಳಪ್ಪ ಜಕ್ಕಪ್ಪನವರ (40) ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಹೊಲಕ್ಕೆ ಹೋಗಿದ್ದ ಮಡಿವಾಳಪ್ಪ ವಾಪಸ್ ಮನೆಗೆ ಬರುವ ವೇಳೆ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆ ಕೆಳಗೆ ಕುಳಿತುಕೊಂಡಿದ್ದರು. ಈ ವೇಳೆ ತುಪ್ಪರಿ ಹಳ್ಳ ತುಂಬಿ ಬಂದಿದ್ದರಿಂದ ರೈತ ಅಲ್ಲೇ ಸಿಲುಕಿಕೊಂಡಿದ್ದರು. ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು.
ಸೇತುವೆ ಮೇಲಿದ್ದ ಕೆಲವರು, ರೈತನನ್ನು ರಕ್ಷಿಸುವುದನ್ನು ಬಿಟ್ಟು, ಸಿಲುಕಿಕೊಂಡಿರುವ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ನಂತರ ರೈತ ಮಡಿವಾಳಪ್ಪ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಇದೀಗ ಹಾರೋಬೆಳವಡಿ ಗ್ರಾಮಸ್ಥರು ರೈತನನ್ನು ಹುಡುಕುವ ಪ್ರಯತ್ನ ಮಾಡುತಿದ್ದಾರೆ.