ಚೆನ್ನೈ: ಕೇರಳದಲ್ಲಿ ಗರ್ಭಿಣಿ ಆನೆಗೆ ಪೈನಾಪಲ್ನಲ್ಲಿ ಸಿಡಿಮದ್ದು ಇಟ್ಟು ಕೊಂದ ಹೃದಯ ವಿದ್ರಾವಕ ಘಟನೆ ನೆನಪಿಸುವಂತ ಘಟನೆ ಊಟಿ ಬಳಿ ನಡೆದಿದೆ. ತಮಿಳುನಾಡಿನ ನೀಲಗಿರಿ ಜಿಲ್ಲೆ ಊಟಿ ಬಳಿ ಸಲಗಕ್ಕೆ ಬೆಂಕಿ ಹಚ್ಚಿ ಕೊಂದಿರೋ ದಾರುಣ ಘಟನೆ ನಡೆದಿದೆ.
ಜನವರಿ 19ರಂದು ಆನೆಯೊಂದು ರೆಸಾರ್ಟ್ವೊಂದರ ಒಳಗೆ ಬರಲು ಪ್ರಯತ್ನಿಸಿದೆ. ಈ ವೇಳೆ ಎಸ್ಟೇಸ್ ಕಾಯುತ್ತಿದ್ದ ರೈಮಾನ್ ಹಾಗೂ ಪ್ರಶಾಂತ್ ದುಷ್ಕೃತ್ಯ ಮೆರೆದಿದ್ದಾರೆ. ಟೈಯರ್ ಗೆ ಬೆಂಕಿ ಹಚ್ಚಿ ಅದನ್ನು ಆನೆಯ ಮೇಲೆ ಎಸೆದಿದ್ದಾರೆ. ಪರಿಣಾಮ ಬೆಂಕಿ ಇದ್ದ ಟೈಯರ್ ಹೊತ್ತುಕೊಂಡು ನೋವಿನಿಂದ ಆನೆ ಘೀಳಿಟ್ಟುಕೊಂಡು ಓಡಿದೆ. ಆನೆಯ ಕಿವಿ ಹಾಗೂ ಹಿಂಭಾಗದಲ್ಲಿ ಸುಟ್ಟ ಗಾಯಗಳಾಗಿವೆ.
ಘಟನೆಯಿಂದ ಗಂಭೀರ ಗಾಯಗೊಂಡ ಆನೆ ತೀವ್ರವಾಗಿ ಅಸ್ವಸ್ಥಗೊಂಡು ಬಿದ್ದಿದೆ. ಈ ವಿಚಾರ ಅರಣ್ಯ ಸಿಬ್ಬಂದಿ ಗಮನಕ್ಕೆ ಬಂದಿದ್ದು, ಕೂಡಲೇ ಅವರು ವೈದ್ಯಕೀಯ ಚಿಕಿತ್ಸೆಗೆಂದು ಆನೆಯನ್ನು ಕರೆದೊಯ್ದಿದ್ದಾರೆ. ಆದರೆ ಅದಾಗಲೇ ಆನೆ ಸುಟ್ಟ ಗಾಯಗಳಿಂದ ಸಾಕಷ್ಟು ನೋವು ಕಂಡು ಕೊನೆಯುಸಿರೆಳೆದಿತ್ತು.
ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ದುಷ್ಟರ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.