ಹುಬ್ಬಳ್ಳಿ: ಕೊರೊನಾ ಹರಡುವ ಭೀತಿ ಹಾಗೂ ಲಾಕ್ಡೌನ್ ಘೋಷಣೆಯಾದರೂ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೇ ಕಾರ್ಯನಿರ್ವಹಿಸಿ ಹೃದಯಾಘಾತದಿಂದ ಸಾವನ್ನಪ್ಪಿದ ಪೌರಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಜಿಲ್ಲಾ ಎಸ್ಸಿ, ಎಸ್ಟಿ ಪೌರಕಾರ್ಮಿಕರ ಸಂಘಟನೆಯ ವತಿಯಿಂದ ಹು-ಧಾ ಮಹಾನಗರ ಪಾಲಿಕೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಲಾಯಿತು.
ಪ್ರಕಾಶ ಹನುಮಂತಪ್ಪ ಚಿಕ್ಕತುಂಬಳ ಅವರು ಮೃತಪಟ್ಟಿದ್ದು, ವಾರ್ಡ್ ನಂ.54ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಮೃತನ ಕುಟುಂಬಕ್ಕೆ ಪರಿಹಾರ ನೀಡಿ, ಕೆಲಸ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಸರ್ಕಾರದಿಂದ 50 ಲಕ್ಷ ರೂ. ಪರಿಹಾರ ಹಾಗೂ ಕುಟುಂಬಸ್ಥರಿಗೆ ಪಾಲಿಕೆಯಲ್ಲಿ ಕೆಲಸ ನೀಡುವಂತೆ ಸಂಘಟನೆ ಒತ್ತಾಯಿಸಿದೆ.
ಪೌರ ಕಾರ್ಮಿಕ ಸಾವನ್ನಪ್ಪಿದರೂ ಸೌಜನ್ಯಕ್ಕೂ ಪಾಲಿಕೆ ಅಧಿಕಾರಿಗಳು ಆಗಮಿಸಿಲ್ಲ. ಸಂಘಟನೆಯಿಂದ ಪ್ರತಿಭಟನೆ ನಡೆಸಿದರೂ ಕ್ಯಾರೆ ಎಂದಿಲ್ಲ. ಅಧಿಕಾರಿಗಳು ನಿಷ್ಕಾಳಜಿ ತೋರಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.