– ಸಿಎಂ ಯಡಿಯೂರಪ್ಪ ನಮ್ಮ ಪಕ್ಷದ ಆತ್ಮ
ಮಂಗಳೂರು: ಯಡಿಯೂರಪ್ಪನವರು ನಮ್ಮ ಪಕ್ಷದ ಆತ್ಮವಿದ್ದಂತೆ, ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಎರಡು ಕಣ್ಣುಗಳಿದ್ದಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ಕಮಲ ಪಾಳಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಆಡಿಯೋದಲ್ಲಿ ಈಗಾಗಲೇ ಮೂವರ ಹೆಸರು ಅಂತಿಮ ರೇಸ್ ನಲ್ಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಈ ವಿಚಾರವಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ. ಇಂದೇ ನಾನು ಮುಖ್ಯಮಂತ್ರಿಗಳಿಗೆ ಈ ಬಗ್ಗೆ ತನಿಖೆ ಆಗಬೇಕೆಂದು ಪತ್ರ ಬರೆಯುತ್ತೇನೆ. ಸತ್ಯ ಅಸತ್ಯತೆಗಳು ತನಿಖೆಯಿಂದಲೇ ಹೊರಬರಲಿ. ರಾಜಕಾರಣದಲ್ಲಿ ಈ ರೀತಿಯ ಅನೇಕ ಪ್ರಕರಣಗಳು ಈ ಹಿಂದೆ ಕೂಡ ಆಗಿದ್ದವು. ಇದು ಸರಿಯಲ್ಲ ಹಾಗಾಗಿ ತನಿಖೆಯಾಗಲಿ ಎಂದು ಹೇಳಿದ್ದಾರೆ.
ನಮ್ಮಲ್ಲಿ ನಾಯಕತ್ವ ಆಗಲಿ ಬೇರೆ ಯಾವುದೇ ಬದಲಾವಣೆಯ ಚರ್ಚೆಗಳೇ ಇಲ್ಲ. ಈ ವಿಷಯ ಅಪ್ರಸ್ತುತ. ನಮ್ಮ ಪಾರ್ಟಿಯ ಆತ್ಮ ಯಡಿಯೂರಪ್ಪನವರು, ಹತ್ತಾರು ವರ್ಷ ಹೋರಾಟ ಮಾಡಿ ನಮ್ಮ ಪಾರ್ಟಿಯನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ಎರಡು ಕಣ್ಣುಗಳಿದ್ದಂತೆ, ಅವರೆಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ನಮ್ಮ ಪಾರ್ಟಿ, ಸರ್ಕಾರ ನಡೆಯುತ್ತಿದೆ. ಹಾಗಾಗಿ ಇಂತಹ ಯಾವುದೇ ಮಾತುಕತೆಗಳು ನಮ್ಮ ಪಾರ್ಟಿಯಲ್ಲಿ ಎಲ್ಲೂ ಚರ್ಚೆ ನಡೆದಿಲ್ಲ. ಹಾಗಾಗಿ ತನಿಖೆಯ ನಂತರ ಇದರ ಸತ್ಯ ಬಹಿರಂಗವಾಗಲಿ ಎಂದಿದ್ದಾರೆ.
ಈ ವಿಚಾರವಾಗಿ ತನಿಖೆಯಾಗದೇ ನಾನು ಯಾರ ಬಗ್ಗೆಯೂ ಸಂಶಯ ವ್ಯಕ್ತಪಡಿಸುವುದಿಲ್ಲ. ಯಾರೇ ಆದರೂ ತನಿಖೆಯಾಗಿ ನಿಜ ಹೊರಗೆಬರುತ್ತದೆ. ಸದ್ಯ ಇಂದು ಅಧಿವೇಶನ ಇರುವುದರಿಂದ ದೆಹಲಿಗೆ ಹೋಗುತ್ತಿದ್ದೇನೆ. ಇನ್ನೂ ತನಿಖೆಗೆ ನಾನು ಸಂಪೂರ್ಣ ಸಹಕಾರವನ್ನು ನೀಡುತ್ತೇನೆ. ಇದನ್ನೂ ಓದಿ: ಮುಂದಿನ ಸಿಎಂ ಸ್ಥಾನಕ್ಕೆ ಹೆಸರುಗಳು ಪಟ್ಟಿ ರೆಡಿಯಾಗಿದೆಯಾ? ಆಡಿಯೋದಲ್ಲಿ ಹೇಳಿದ ಮೂವರು ಯಾರು?