ಬೆಂಗಳೂರು: ಇಂದಿನಿಂದ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಲಿದೆ. ಸುಮಾರು 19 ದಿನಗಳ ಕಾಲ ಈ ಅಧಿವೇಶನ ನಡೆಯಲಿದೆ.
ಸೋಮವಾರ ಸಿಎಂ ಯಡಿಯೂರಪ್ಪ ರಾಜ್ಯದ ಬಜೆಟ್ ಮಂಡನೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಇಂದು ಮತ್ತು ನಾಳೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ.
ವಿಧಾನಸಭೆ ಕಲಾಪ ಪ್ರಾರಂಭವಾದ ಕೂಡಲೇ ಒಂದು ರಾಷ್ಟ್ರ ಒಂದು ಚುನಾವಣೆ ಬಗ್ಗೆ ಚರ್ಚೆಗೆ ಅವಕಾಶ ಕೊಡಲಾಗಿದೆ. ವಿಧಾನ ಪರಿಷತ್ ನಲ್ಲಿ ಮೊದಲು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಕಾರ್ಯ ಕಲಾಪ ನಡೆಯುತ್ತೆ. ಬಳಿಕ ಪ್ರಶ್ನೋತ್ತರ ಮತ್ತು ನಿಯಮ 330, ಗಮನ ಸೆಳೆಯುವ ಸೂಚನೆ ಬಳಿಕ ಒಂದು ರಾಷ್ಟ್ರ ಮತ್ತು ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ. ಈ ಚರ್ಚೆಯೂ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಬಗ್ಗೆ ಮಾತ್ರ ಇರಲಿದೆ. ರಾಜ್ಯ ಚುನಾವಣೆ ಆಯೋಗ ನಡೆಸುವ ಚುನಾವಣೆ ಬಗ್ಗೆ ಚರ್ಚೆ ಆಗೋದಿಲ್ಲ ಅಂತ ಸ್ಪೀಕರ್ ಕಾಗೇರಿ ಸ್ಪಷ್ಟಪಡಿಸಿದ್ದಾರೆ.
ಇತ್ತ ಕಲಾಪದಲ್ಲಿ ರಾಸಲೀಲೆ ಪ್ರಕರಣ ಪ್ರಸ್ತಾಪವಾಗುವ ಸಾಧ್ಯತೆಗಳಿವೆ. ಈಗಾಗಲೇ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟರೂ ಅಧಿವೇಶನದಲ್ಲಿ ಕಾಂಗ್ರೆಸ್, ಜೆಡಿಎಸ್ ಅದೇ ಅಸ್ತ್ರ ಉಪಯೋಗಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ರಾಸಲೀಲೆ ಪ್ರಸ್ತಾಪ ಮಾಡಿ ಸರ್ಕಾರಕ್ಕೆ ಮುಜುಗರ ತರೋ ಪ್ಲ್ಯಾನ್ ಅನ್ನು ಕಾಂಗ್ರೆಸ್, ಜೆಡಿಎಸ್ ಹೂಡಿವೆ.
ಜಾರಕಿಹೊಳಿ ಸಿಡಿ ವಿಚಾರ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರವಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮುಜುಗರ ಉಂಟು ಮಾಡುವುದು. ಪಂಚರಾಜ್ಯ ಚುನಾವಣೆಯಲ್ಲಿ ಸಿಡಿ ಅಸ್ತ್ರ ಬಳಸಿ ಮತ್ತಷ್ಟು ಡ್ಯಾಮೇಜ್ ಮಾಡೋದು. ಸಿಡಿಯಲ್ಲಿ ಬಿಎಸ್ವೈಯವರನ್ನ ಭ್ರಷ್ಟ ಎಂದಿರುವ ಜಾರಕಿಹೊಳಿ ಹೇಳಿಕೆ ಆಧರಿಸಿ ಸಿಎಂ ಮೇಲೆಯೂ ಮುಗಿಬೀಳಲು ಪ್ಲ್ಯಾನ್ ಮಾಡಲಾಗಿದೆ. ಈ ಮೂಲ ತನಿಖೆಗೆ ಒತ್ತಾಯಿಸಿ ಯಡಿಯೂರಪ್ಪರನ್ನ ಇಕ್ಕಟ್ಟಿಗೆ ಸಿಲುಕಿಸೋದು ಕಾಂಗ್ರೆಸ್, ಜೆಡಿಎಸ್ ತಂತ್ರವಾಗಿದೆ.