ಶಿವಮೊಗ್ಗ: ನಾಗರಿಕರು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಚೇರಿಯಿಂದ ತಮ್ಮ ಆಸ್ತಿಗಳಿಗೆ ಸಂಬಂಧಿಸಿದಂತೆ ಋಣಭಾರ ಪ್ರಮಾಣ ಪತ್ರ (ಇಸಿ) ವನ್ನು ಆನ್ಲೈನ್ನಲ್ಲಿ ಮಾತ್ರವಲ್ಲದೆ, ಆಫ್ಲೈನ್ ಮೂಲಕ ಸಹ ಪಡೆಯಲು ಅವಕಾಶ ನೀಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಋಣಭಾರ ಪತ್ರವನ್ನು ಪಡೆಯಲು ಸಾರ್ವಜನಿಕರು ಕಷ್ಟಪಡುವುದನ್ನು ಮನಗಂಡು ಸರ್ಕಾರ ಈ ಹಿಂದೆ ಆನ್ಲೈನ್ ಮೂಲಕ ಪಡೆಯಲು ಅವಕಾಶ ನೀಡಿರುವುದು ಅಭಿನಂದನೀಯ. ಇದರಿಂದ ನಾಗರಿಕರು ಮಧ್ಯವರ್ತಿಗಳ ಹಾವಳಿಯಿಂದ ಮತ್ತು ಕಚೇರಿಗಳಲ್ಲಿ ಉಂಟಾಗುತ್ತಿದ್ದ ಅನಾನುಕೂಲತೆಗಳಿಂದ ಮುಕ್ತರಾಗಲು ಸಾಧ್ಯವಾಗಿದೆ. ಆದರೆ ಬಹಳಷ್ಟು ಮಂದಿಗೆ ಆನ್ಲೈನ್ ಬಳಕೆ ಬಗ್ಗೆ ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ.
ಋಣಭಾರ ಪ್ರಮಾಣ ಪತ್ರ ಪಡೆಯಲು ಜನರಿಗೆ ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಆನ್ಲೈನ್ ಜೊತೆಗೆ ತಾತ್ಕಾಲಿಕವಾಗಿ ಆಫ್ಲೈನ್ ಮೂಲಕವೂ ಋಣಭಾರ ಪ್ರಮಾಣ ಪತ್ರ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಸಿಎಂ ಹಾಗೂ ಕಂದಾಯ ಸಚಿವರಿಗೆ ಮನವಿ ಮಾಡಿದ್ದಾರೆ.