ಲಕ್ನೋ: ರಾಮಭಕ್ತರ ಅಗ್ನಿಪರೀಕ್ಷೆ ಮಾಡಬೇಡಿ, ಭಕ್ತರು ತಮ್ಮ ನಂಬಿಕೆ ಮತ್ತು ಭಕ್ತಿಯಿಂದ ಕಾಣಿಕೆ ನೀಡುತ್ತಾರೆ. ಆ ಹಣದಲ್ಲಿ ಅಕ್ರಮ ಎಸಗುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಎಚ್ಚರಿಸಿದ್ದಾರೆ. ಪ್ರಕರಣವನ್ನು ರಾಜಕೀಯಗೊಳಿಸುವ ಪ್ರಯತ್ನಗಳ ವಿರುದ್ಧವೂ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಡಿಯೋರಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಪ್ರಕರಣದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ. ಸನಾತನದ ಭಾವನೆಗಳನ್ನು ನೋಯಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದರು. ಇದನ್ನೂ ಓದಿ: ರಾಮಮಂದಿರ ದೇಣಿಗೆ ಕಳ್ಳತನ ವಿವಾದ – SIT ವರದಿ ಬಳಿಕ 8 ಮಂದಿ ವಿರುದ್ಧ ಎಫ್ಐಆರ್, ಇಬ್ಬರು ಅರೆಸ್ಟ್
ವಿರೋಧ ಪಕ್ಷಗಳನ್ನು ಟೀಕಿಸಿದ ಅವರು, ಈ ವಿಷಯವನ್ನು ಮತ್ತೆ ಎತ್ತಲು ಪ್ರಯತ್ನಿಸುತ್ತಿರುವವರು ರಾಮಮಂದಿರವನ್ನು (Ram Mandir) ವಿರೋಧಿಸಿದ ಅದೇ ಜನರು. ಅವರು ಭಗವಾನ್ ರಾಮನೇ ಇಲ್ಲ ಎಂದು ಹೇಳಿಕೊಂಡರು ಮತ್ತು ದೇವಾಲಯದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ನಿರಂತರವಾಗಿ ವಾದಿಸುತ್ತಿದ್ದರು. ಅವರು ರಾಮಭಕ್ತರ ಮೇಲೆ ಗುಂಡುಗಳನ್ನು ಹಾರಿಸಿದರು ಮತ್ತು ರಾಮ ನವಮಿಯಂದು ಗಲಭೆಗಳಿಗೆ ಕಾರಣರಾಗಿದ್ದರು ಎಂದು ಹೇಳಿದರು.
ಇಂತಹ ಜನರು ಕೆಟ್ಟ ಉದ್ದೇಶ ಹೊಂದಿರುವುದರಿಂದ ಈ ವಿಷಯವನ್ನು ಎತ್ತುತ್ತಿದ್ದಾರೆ. ಅದಕ್ಕಾಗಿ ಹೇಳುತ್ತಿದ್ದೇನೆ ರಾಮಭಕ್ತರ ಅಗ್ನಿಪರೀಕ್ಷೆಯನ್ನು ತೆಗೆದುಕೊಳ್ಳಬೇಡಿ. ನಿಮ್ಮ ಬಳಿ ಪುರಾವೆಗಳಿದ್ದರೆ, ಅದನ್ನು ಎಸ್ಐಟಿಗೆ ಒಪ್ಪಿಸಿ. ಈ ವಿಷಯವನ್ನು ರಾಜಕೀಯಗೊಳಿಸುವುದನ್ನು ತಪ್ಪಿಸಿ ಎಂದು ತಿಳಿಸಿದರು. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ದುರ್ಬಳಕೆ ಆರೋಪ – ಸಿಬಿಐ ತನಿಖೆಗೆ ನಿರ್ದೇಶನ ಕೋರಿ ಸುಪ್ರೀಂಗೆ ಅರ್ಜಿ

