ಹೈದರಾಬಾದ್: ತಾನು ಪ್ರೀತಿಸಿದಾಕೆ ಬೇರೊಬ್ಬನನ್ನು ಮದುವೆಯಾದಳೆಂದು ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಬಂದಸೋಮರಂ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು 22 ವರ್ಷದ ಸುಧೀರ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷದಿಂದ ಇದೇ ಗ್ರಾಮದಲ್ಲಿ ಕೋಳಿ ಫಾರ್ಮ್ ನಲ್ಲಿ ಕೆಲಸ ಮಾಡಿಕೊಂಡಿದ್ದನು. ಇಲ್ಲಿಯೇ ಇತ್ತೀಚೆಗೆ ಯುವತಿ ಹಾಗೂ ಆಕೆಯ ಸಹೋದರಿ, ಸಹೋದರ ಕೂಡ ಕೆಲಸಕ್ಕೆ ಸೇರಿಕೊಂಡಿದ್ದರು.
ಸಹೋದ್ಯೋಗಿಗಳಾಗಿದ್ದ ಸುಧೀರ್ ಮತ್ತು ಯುವತಿಯ ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ 25 ದಿನಗಳ ಹಿಂದೆಯಷ್ಟೇ ಯುವತಿ ತನ್ನ ಸಹೋದರನ ಜೊತೆ ಊರಿಗೆ ತೆರಳಿದ್ದಳು. ಆದರೆ ಯುವತಿ ಸಹೋದರಿ ಮಾತ್ರ ಬಂದಸೋಮರಂ ಗ್ರಾಮದಲ್ಲೇ ಇದ್ದಳು.
ಇತ್ತ ಹೀಗೆ ಹೋದ ಯುವತಿಗೆ ಮನೆಯವರು ಮದುವೆ ಮಾಡಿಸಿದ್ದಾರೆ. ಈ ಫೋಟೋಗಳನ್ನು ಯುವತಿ ಸಹೋದರಿ ಸುಧೀರ್ ಗೆ ಕಳುಹಿಸಿದ್ದಾಳೆ. ಇದರಿಂದ ಸುಧೀರ್ ಹಲವು ದಿನಗಳಿಂದ ನೊಂದುಕೊಂಡಿದ್ದನು. ಬಳಿಕ ಅಲ್ಲದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಸ್ಐ ರಾಘವೇಂದ್ರ ತಿಳಿಸಿದ್ದಾರೆ.