ಚಿಕ್ಕಮಗಳೂರು: ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆಯ ನಮೋ ಭಾರತ್ ಕಾರ್ಯಕ್ರಮಕ್ಕೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು ಗಲಾಟೆ ಮಧ್ಯೆಯೇ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಗಿದೆ.
ನಗರದ ವಿಜಯಪುರದಲ್ಲಿ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರ ನಮೋ ಭಾರತ್ (Namo Bharat) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಯುಪಿಎ 10 ವರ್ಷಗಳಲ್ಲಿ ಆರ್ಥಿಕತೆಯನ್ನು ನಿಷ್ಕ್ರಿಯಗೊಳಿಸಿತ್ತು: ಶ್ವೇತಪತ್ರ ಹೊರಡಿಸಿದ ಮೋದಿ ಸರ್ಕಾರ
ಚಕ್ರವರ್ತಿ ಸೂಲಿಬೆಲೆ ಬರುವ ಮಾರ್ಗದಲ್ಲೇ 17 ಯೂತ್ ಕಾಂಗ್ರೆಸ್ (Youth Congress) ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರೆ, ಇನ್ನೊಂದು ತಂಡ ರಸ್ತೆ ಮಧ್ಯೆ ಅರೆ ಬೆತ್ತಲೆಯಾಗಿಯಾಗಿ ಪ್ರತಿಭಟಿಸಿತು. ಮತ್ತೊಂದು ತಂಡ ಕಾರ್ಯಕ್ರಮದ ವೇದಿಕೆಯ ಹಿಂಭಾಗ ಚಕ್ರವರ್ತಿ ಸೂಲಿಬೆಲೆ ಭಾಷಣದ ಮೇಲೆ ಮಹಡಿ ಮೇಲಿನಿಂದ ಕಪ್ಪು ಬಾವುಟದಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಹೇಳನಕಾರಿಯಾಗಿ ಬರೆದು ಜೋತುಬಿಟ್ಟರು. ಇದನ್ನೂ ಓದಿ: ಮತ್ತೆ ಮೋದಿ ಸರ್ಕಾರ; ಎನ್ಡಿಎಗೆ 335, ಇಂಡಿಯಾ ಮೈತ್ರಿಕೂಟಕ್ಕೆ 166
ಕ್ಷಣಾರ್ಧದಲ್ಲಿ ನೋಡ ನೋಡುತ್ತಿದ್ದಂತೆ ವೇದಿಕೆ ಹಿಂಭಾಗದಲ್ಲಿ ಉದ್ವಿಗ್ನದ ಪರಿಸ್ಥಿತಿ ನಿರ್ಮಾಣವಾಯ್ತು. ಕಾಂಗ್ರೆಸ್ ಕಾರ್ಯಕರ್ತರು ಬಾವುಟವನ್ನು ಜೋತು ಬಿಡುತ್ತಿದ್ದಂತೆ 200ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಮಹಡಿ ಮೇಲೆ ಹತ್ತಲು, ಕಾಂಗ್ರೆಸ್ ಕಾರ್ಯಕರ್ತರಿಗೆ ಧರ್ಮದೇಟು ನೀಡಲು ಯತ್ನಿಸಿದರು. ಆದರೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಮಾಜಿ ಶಾಸಕ ಸಿಟಿ ರವಿ (CT Ravi) ಕೂಡ ವೇದಿಕೆ ಮುಂಭಾಗದಿಂದ ಬಂದು ಬಾವುಟ ಪ್ರದರ್ಶಿಸಿದವರ ವಿರುದ್ಧ ಅಸಮಾಧಾನ ಹೊರ ಹಾಕಿದರು. ಸುಮಾರು ಅರ್ಧ ಗಂಟೆಗಳ ಕಾಲ ಸ್ಥಳದಲ್ಲಿ ಉದ್ವಿಗ್ನತೆಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಸರ್ಪಗಾವಲಿನಲ್ಲಿ ಬಾವುಟ ಪ್ರದರ್ಶಿಸಿದ ಮೂವರು ಯುವಕರನ್ನು ಕರೆದೊಯ್ದರು.
ಕಾರ್ಯಕ್ರಮದ ಬಳಿಕ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ನನಗೆ ಇದೇನೋ ಹೊಸದಲ್ಲ. ಕಾಂಗ್ರೆಸ್ಸಿಗರ ಆರೋಪಕ್ಕೆ ನಾನು ಉತ್ತರ ನೀಡಿದ್ದೇನೆ. ನನ್ನ ಉತ್ತರ ಕಾಂಗ್ರೆಸ್ಗಳಿಗೆ ಭಯ ತರಿಸಿದೆ. ಕಾಂಗ್ರೆಸ್ಸಿಗರು ಹೆಚ್ಚು ಆರೋಪ ಮಾಡಿದಷ್ಟು ನಮಗೆ ಲಾಭ. ಪ್ರಿಯಾಂಕ್ ಖರ್ಗೆ ಹಾಗೂ ಮಧು ಬಂಗಾರಪ್ಪ ಈ ರೀತಿಯ ಮಾತುಗಳನ್ನು ಆಡಿದ್ದಾರೆ. ಅವರ ಹೇಳಿಕೆಗಳು ನನಗೆ ಖುಷಿ ಕೊಡುತ್ತೆ. ನಾಳೆಯಿಂದ ಇಡೀ ರಾಜ್ಯದ ಪ್ರವಾಸ ಮಾಡುತ್ತೇನೆ ಎಂದು ಹೇಳಿದರು.