– ಜ್ಯೋತಿಷಿ ಮೊರೆ ಹೋದ ಬಿಎಸ್ವೈ
ಬೆಂಗಳೂರು: ಸಾಲು ಸಾಲು ಮಂತ್ರಿಗಳು ರಾಜೀನಾಮೆ ನೀಡಿ ಸರ್ಕಾರ ಪತನದ ಸುಳಿವು ಸಿಗುತ್ತಿದ್ದಂತೆ ಬಿ.ಎಸ್.ಯಯೂರಪ್ಪನವರು ಖ್ಯಾತ ಜ್ಯೋತಿಷಿಯೊಬ್ಬರ ಮೊರೆ ಹೋಗಿದ್ದಾರೆ.
ಹೌದು. ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಶನಿವಾರ ರಾತ್ರಿ ಎಂಟಿಬಿ ನಾಗರಾಜ್ ಅವರನ್ನು ಮನ ಒಲಿಸಿದ್ದರು. ನಾಯಕರುಗಳು ಇದ್ದಾಗ ಮಾಧ್ಯಮಗಳ ಮುಂದೆ ಎಂಟಿಬಿ ಒಂದು ಹೇಳಿಕೆ ನೀಡಿದ್ದರೆ ನಂತರ ಯೂಟರ್ನ್ ಹೊಡೆದು ಇಂದು ದಿಢೀರ್ ಆಗಿ ಮುಂಬೈಗೆ ತೆರಳಿ ಅತೃಪ್ತರನ್ನು ಸೇರಿಕೊಂಡಿದ್ದಾರೆ. ಎಂಟಿಬಿ ನಾಗರಾಜ್ ಮನವೊಲಿಕೆ ವಿಫಲವಾದ ಬೆನ್ನಲ್ಲೇ ಬಿ.ಎಸ್.ಯಡಿಯೂರಪ್ಪನವರು ಜ್ಯೋತಿಷಿಯೊಬ್ಬರ ಮೊರೆ ಹೋಗಿ ಭವಿಷ್ಯ ಕೇಳಿಕೊಂಡು ಬಂದಿದ್ದಾರೆ.
ಸರ್ಕಾರ ಉರುಳುವ ಸಂದರ್ಭದಲ್ಲಿ, ಸಿಎಂ ಆಗುವ ಯೋಗಾಯೋಗದ ಬಗ್ಗೆ ಖ್ಯಾತ ಜ್ಯೋತಿಷಿ ಯೊಬ್ಬರ ಬಳಿ ಬಿಎಸ್ವೈ ಭವಿಷ್ಯ ಕೇಳಿದ್ದಾರೆ. ಈಗಾಗಲೇ ಸುಮಾರು ಏಳೂವರೆ ವರ್ಷಗಳ ಕಾಲ ಯಡಿಯೂರಪ್ಪನವರಿಗೆ ಶನಿ ಕಾಟ ಇತ್ತು. ಈಗ ಸಾಡೇ ಸಾತ್ ಕೊನೆಯ ವರ್ಷ. ಇನ್ನೇನು ಏಳುವರೆ ವರ್ಷ ಶನಿ ಕಾಟದ ಕೊನೆಯ ತಿಂಗಳು ಹೀಗಾಗಿ ಬಿ.ಎಸ್.ಯಡಿಯೂರಪ್ಪ ಫುಲ್ ಆಕ್ಟಿವ್ ಆಗಿದ್ದು, ಸರ್ಕಾರ ರಚಿಸಲು ಎಲ್ಲ ತಯಾರಿ ನಡೆಸುತ್ತಿದ್ದಾರೆ.
ಬಿಎಸ್ವೈ ಸಿಎಂ ಆಗಲು ಈ ಹಿಂದೆ ಸಾಕಷ್ಟು ಕಂಟಕ ಇದೆ. ಶನಿ ಕಾಟ ಇದೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದ್ದರು. ಈ ಕಂಟಕ ನಿವಾರಣೆಗಾಗಿ ಯಡಿಯೂರಪ್ಪನವರು ಮಹಾ ಪೂಜೆಗಳನ್ನು ನಡೆಸಿಕೊಂಡು ಬಂದಿದ್ದರು.
ಯಡಿಯೂರಪ್ಪನವರು ವೃಶ್ಚಿಕ ರಾಶಿ ಅನುರಾಧ ನಕ್ಷತ್ರದಲ್ಲಿ ಜನಿಸಿದ್ದಾರೆ. ಭೇಟಿ ನೀಡಿದ ವೇಳೆ ಜ್ಯೋತಿಷಿಗಳಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಕಂಟಕಗಳು ಎದುರಾದರೂ ಸಾಡೇಸಾತ್ ಬಿಡುವ ಸಮಯದಲ್ಲಿ ಕೆಲವರ ಅದೃಷ್ಟ ಬದಲಾಗಲಿದೆ ಎಂದು ಜ್ಯೋತಿಷಿಗಳು ಯಡಿಯೂರಪ್ಪನವರಿಗೆ ತಿಳಿಸಿದ್ದಾರೆ.
ಏಳೂವರೆ ಶನಿ ಆರಂಭಗೊಂಡ ಸಮಯದಲ್ಲಿ ಭಾರೀ ಕಾಟವನ್ನು ನೀಡಿದರೆ ಬಿಡುವ ಸಮಯದಲ್ಲಿ ವ್ಯಕ್ತಿಗೆ ಒಳ್ಳೆಯದನ್ನು ಮಾಡುತ್ತಾನೆ ಎನ್ನುವ ನಂಬಿಕೆಯಿದೆ.