ಯಾದಗಿರಿ: ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಂಬ ಪರ್ವತದಿಂದಲೇ ಕಾಂಗ್ರೆಸ್ ನಾಶವಾಗುತ್ತದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಶ್ವರ ಖಂಡ್ರೆಯವರು ಮಲ್ಲಿಕಾರ್ಜುನ ಖರ್ಗೆಯನ್ನು ಪರ್ವತ ಎಂದು ಕರೆದಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ ಜಾಧವ್, ಮಲ್ಲಿಕಾರ್ಜುನ ಖರ್ಗೆ ಹಳೆ ಪರ್ವತ ಅದು ತಾನೇ ಬೀಳುತ್ತದೆ. ಖರ್ಗೆ ಎಂಬ ಪರ್ವತ ತಂದು ಕಾಂಗ್ರೆಸ್ ತಾನೆ ನಾಶವಾಗುತ್ತದೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್-ಜೆಡಡಿಎಸ್ ಸರ್ಕಾರ ಪತನವಾಗಲಿದೆ. ಬಿ.ಎಸ್ ಯಡಿಯೂರಪ್ಪ ಮತ್ತೆ ಸಿಎಂ ಆಗಲಿದ್ದಾರೆ. ಇದು ನೂರಕ್ಕೂ ನೂರರಷ್ಟು ಸತ್ಯ. ನನ್ನನ್ನು ಕಾಂಗ್ರೆಸ್ ನವರೆ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿ ಟಿಕೆಟ್ ಪೈನಲ್ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ವಿವಿಧ ದೇವಸ್ಥಾನಗಳಿಗೆ ಭೇಟಿ ಮಾಡಿದ್ದೇನೆ. ನನಗೆ ಮತ್ತು ಮೋದಿಗೆ ದೇವರು ಒಳ್ಳೆಯದು ಮಾಡಲಿ ಎಂದು ದೇವರ ದರ್ಶನ ಮಾಡಿದ್ದೇನೆ ಎಂದು ತಿಳಿಸಿದ್ರು.
ನನಗೆ ಕ್ಷೇತ್ರದ ಎಲ್ಲ ಕಡೆ ಬೆಂಬಲ ಸಿಗುತ್ತಿದೆ. ನನ್ನ ರಾಜೀನಾಮೆ ವಿಚಾರದಲ್ಲಿ ಕೆಲವರು ಸುಮ್ಮನೆ ಗೊಂದಲ ಸೃಷ್ಟಿ ಮಾಡಿದ್ದಾರೆ. ಕಾನೂನಿನಲ್ಲಿ ತೊಡಕು ಇಲ್ಲ ನನ್ನ ರಾಜೀನಾಮೆಯನ್ನು ಸ್ಪೀಕರ್ ಅವರು ವಿಶೇಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಪೀಕರ್ ಮತ್ತೆ ನನಗೆ ಪತ್ರ ಬರೆದಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಯಾರ ಕೈಗೊಂಬೆಯಾಗಿಲ್ಲ. ಸ್ಪೀಕರ್ ಅವರು ಈ ತಿಂಗಳ 24ಕ್ಕೆ ನನ್ನನ್ನು ವಿಚಾರಣೆ ಕರೆದಿದ್ದು 25ರ ಒಳಗೆ ರಾಜೀನಾಮೆ ಅಂಗಿಕಾರ ಆಗುತ್ತದೆ ಅಂದ್ರು.
ಸದ್ಯ ಕಾಂಗ್ರೆಸ್ ನಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಪಕ್ಷ ಬಿಟ್ಟು ಬಿಜೆಪಿ ಸೇರುತ್ತಿದ್ದಾರೆ. ನಾನು ಸಚಿವ ಆಗಬೇಕೆಂದು ಚಿಂಚೋಳಿ ಕ್ಷೇತ್ರದ ಜನರ ಆಸೆ ಇತ್ತು. ಈ ಮೈತ್ರಿ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬುವುದಕ್ಕೆ ನಮ್ಮ ಕ್ಷೇತ್ರದ ಜನ ಬೇಸರಗೊಂಡಿದ್ದಾರೆ ಎಂದು ಅವರು ಹೇಳಿದ್ರು.