ಯಾದಗಿರಿ: ತೂಕದ ಯಂತ್ರಕ್ಕೆ ಕಂಟ್ರೋಲರ್ ಅಳವಡಿಸಿ ಅನ್ನದಾತರ ಅನ್ನಕ್ಕೆ ಕನ್ನ ಹಾಕುವ ದಂಧೆ ಯಾದಗಿರಿಯಲ್ಲಿ ಭರ್ಜರಿಯಾಗಿ ನಡೆಯುತ್ತದೆ.
ಜಿಲ್ಲೆಯಲ್ಲಿ ಸದ್ಯ ಹತ್ತಿ ಮಾರಾಟ ಜೋರಾಗಿದ್ದು, ಹತ್ತಿ ಖರೀದಿಗಾಗಿ ರಾತ್ರೋರಾತ್ರಿ ಅನಧಿಕೃತ ದಲ್ಲಾಳಿಗಳ ಖಾಸಗಿ ಖರೀದಿ ಕೇಂದ್ರಗಳು ನಾಯಿ ಕೊಡೆಯಂತೆ ಎದ್ದಿವೆ. ವಿವಿಧ ಗ್ರಾಮಗಳ ರಸ್ತೆ ಬದಿ ಹಾಕಲಾಗಿರುವ ಈ ಅನಧಿಕೃತ ಹತ್ತಿ ಖರೀದಿ ಕೇಂದ್ರದಲ್ಲಿ, ರೈತರು ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆದ ಹತ್ತಿಯ ತೂಕದಲ್ಲಿ ಹಾಡ ಹಗಲೇ ದಲ್ಲಾಳಿಗಳು ಮಹಾ ಮೋಸ ಮಾಡುತ್ತಿದ್ದಾರೆ.
ತೂಕದ ಯಂತ್ರದಲ್ಲಿ ಕಂಟ್ರೋಲ್ ಅಳವಡಿಸಲಾಗಿದ್ದು ಇದರಿಂದ ಒಂದು ಕ್ವಿಂಟಲ್ ಹತ್ತಿ ಕೇವಲ 40 ಕೆಜಿ ತೋರಿಸುತ್ತದೆ. ಈ ಮೋಸವನ್ನು ಸತ್ವಃ ರೈತರೆ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ಗ್ರಾಮದ ರೈತರು, ಅನಧಿಕೃತ ದಲ್ಲಾಳಿಗಳ ಹಾಕಿರುವ ಶೆಡ್ ಗಳಲ್ಲಿ ಹತ್ತಿ ಮಾರಾಟ ಮಾಡಲು ಹೋದಾಗ ಈ ಮೊಸದ ಜಾಲ ಬೆಳಕಿಗೆ ಬಂದಿದೆ. ಈ ಬಗ್ಗೆ ದಲ್ಲಾಳಿಗಳನ್ನು ರೈತರು ತರಾಟೆ ತೆಗೆದುಕೊಂಡಾಗ ಅಲ್ಲಿಂದ ದಲ್ಲಾಳಿಗಳು ಎಸ್ಕೇಪ್ ಆಗಿದ್ದಾರೆ.