ಮಡಿಕೇರಿ: ತಾಯಿ ಮಡಿಲಿನಲ್ಲಿ ಆಡಿ ನಲಿಯಬೇಕಾದ ಪುಟ್ಟ ಕಂದಮ್ಮ ಪ್ರಪಂಚವನ್ನೇ ನೋಡುವ ಮುನ್ನ ಅನಾಥವಾಗಿದೆ. ಒಂಭತ್ತು ತಿಂಗಳು ಪೋಷಣೆ ಮಾಡಿ, ಹೆತ್ತು, ಹೊತ್ತ ತಾಯಿ ಕಂದನನ್ನು ನೋಡಿದ ಕೆಲವೇ ಗಂಟೆಗಳಲ್ಲಿ ಇಹಲೋಕ ತ್ಯಜಿಸಿದ್ದು, ವೈದ್ಯರ ನಿರ್ಲಕ್ಷ್ಯವೇ ಬಾಣಂತಿ ಸಾವಿಗೆ ಕಾರಣ ಎಂದು ಮೃತ ಬಾಣಂತಿಯ ಸಂಬಂಧಿಕರು ಆರೋಪಿಸಿದ್ದಾರೆ.
ಹೌದು, ಒಂಬತ್ತು ತಿಂಗಳು ತುಂಬಿದ ಹಿನ್ನೆಲೆ ಹೆರಿಗೆ ನೋವಿನಿಂದ ಬಳಲುತ್ತಿದ್ದ 22 ವರ್ಷ ಪ್ರಾಯದ ಹರ್ಷಿತರನ್ನು ಮನೆಯವರು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕಳೆದ 20 ರಂದು ದಾಖಲಿಸಿದ್ದರು. ಸೋಮವಾರ ಸಂಜೆ ಗಂಡು ಮಗುವಿಗೆ ಹರ್ಷಿತ ಜನ್ಮ ನೀಡಿದ್ದರು. ಮಗು ಹುಟ್ಟಿದ್ದರಿಂದ ಕುಟುಂಬಸ್ಥರಲ್ಲಿ ಸಂತೋಷ ಮನೆ ಮಾಡಿತ್ತು. ಆದರೆ ಬಾಣಂತಿ ಸಾವು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ. ಬಾಣಂತಿ ಮೃತಪಟ್ಟ ಬಳಿಕ ಮೈಸೂರಿಗೆ (Mysuru) ವೈದ್ಯರ ರೆಫರ್ ಮಾಡಿದ್ದಾರೆ. ಮೈಸೂರಿಗೆ ಚಿಕಿತ್ಸೆಗೆ ಕೊಂಡೊಯ್ಯುವಂತೆ ಸೂಚಿಸಿದ ವೈದ್ಯೆ ರೇಷ್ಮ ಅವರ ವಿರುದ್ಧ ಬಾಣಂತಿ ಪತಿ ಪ್ರದೀಪ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಬಂದಿದ್ದು ಆಲೂಗಡ್ಡೆ- ಗ್ರಾಹಕ ಕಕ್ಕಾಬಿಕ್ಕಿ!
ಮೂಲತಃ ಕೊಡಗು (Kodagu) ಜಿಲ್ಲೆಯ ಕುಶಾಲನಗರ (Kushala nagar) ತಾಲೂಕಿನ ಸುಂಟಿಕೊಪ್ಪದ ನಿವಾಸಿಯಾದ ಹರ್ಷಿತ ಅವರನ್ನು ಪತಿ ಪ್ರದೀಪ್ ಅವರು ಹೆರಿಗೆ ನೋವು ಬಂದ ಸಮಯದಲ್ಲಿ ಮಾದಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದ್ದಾರೆ. ಆದರೆ ಹರ್ಷಿತ ಅವರಿಗೆ ವಿಪರೀತವಾಗಿ ರಕ್ತಸ್ರಾವ ಆಗುತ್ತಿದ್ದ ಹಿನ್ನೆಲೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಹರ್ಷಿತ ಅವರು ಸಹಜ ಸ್ಥಿತಿಯಲ್ಲಿ ಇರುತ್ತಾರೆ. ಮಗು ಜನಿಸಿದ ಕೆಲವೇ ಗಂಟೆಗಳಲ್ಲಿ ಆರೋಗ್ಯ ಹದಗೆಟ್ಟ ಪರಿಣಾಮ ಮತ್ತು ಜಾಂಡೀಸ್ (Jaundice) ಇರುವುದನ್ನು ಕಂಡು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯೆ ರೇಷ್ಮ ತಿಳಿಸಿದ್ದಾರೆ. ಆದರೆ ಮೈಸೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ಬಾಣಂತಿ ಮೃತಪಟ್ಟಿದ್ದು, ಮಡಿಕೇರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಮಹಿಳೆ ಸಾವನ್ನಪ್ಪಲು ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಇದನ್ನು ಅಲ್ಲಗೆಳೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ವೈದ್ಯಧಿಕಾರಿ ಡಾಕ್ಟರ್ ವೆಂಕಟೇಶ್, ಮೃತಪಟ್ಟ ಮಹಿಳೆಯ ಪರೀಕ್ಷೆಗಳನ್ನು ಸರಿಯಾಗಿ ಮಾಡಿಲ್ಲ. ಗರ್ಭಿಣಿಯಾಗಿರುವಾಗ ಪರೀಕ್ಷೆಗಳು ಸರಿಯಾಗಿ ನಡೆಸಿಲ್ಲ. ಅವರಿಗೆ ಜಾಂಡೀಸ್ ಇರುವುದು ಹೆರಿಗೆ ಸಂದರ್ಭ ತಿಳಿದುಬಂದಿದೆ. ಹೆರಿಗೆ ಬಳಿಕ ರಕ್ತಸ್ರಾವ ಹೆಚ್ಚಾಗಿದ್ದನ್ನು ಅವರಿಗೆ ಹೇಳಿದ್ವಿ. ಆ ಬಳಿಕ ಮೈಸೂರು ಆಸ್ಪತ್ರೆಗೆ ಅವರನ್ನು ಕಳುಹಿಸಲಾಯಿತು. ಆ ವೇಳೆ ಕೂಡ ನಮ್ಮ ಆಸ್ಪತ್ರೆ ವೈದ್ಯರು ಜೊತೆಗಿದ್ದರು. ಆದರೆ ಆಸ್ಪತ್ರೆ ಸೇರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಚಿಕಿತ್ಸೆ ನೀಡಿದ ವೈದ್ಯರ ಬಳಿ ವರದಿ ಕೇಳಲಾಗಿದೆ. ಅಲ್ಲದೇ ಈ ಪ್ರಕರಣವನ್ನು ತನಿಖೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ-ದ.ಆಫ್ರಿಕಾ ಟಿ-20 ಸರಣಿಗೆ ಪರಿವೀಕ್ಷಕರಾಗಿ ಬೆಳಗಾವಿ ಮೂಲದ ಅವಿನಾಶ್ ನೇಮಕ
ಒಟ್ಟಾರೆ ವೈದ್ಯರ ನಿರ್ಲಕ್ಷ್ಯವೋ ಅಥವಾ ಮನೆಯವರು ನಿರ್ಲಕ್ಷ್ಯವೋ ಎಂದು ತನಿಖೆ ನಂತರ ಅಷ್ಟೇ ಗೊತ್ತಾಗಬೇಕಿದೆ. ಆದರೆ ವೈದ್ಯರು ಹಾಗೂ ಕುಟುಂಬಸ್ಥರ ಪರಸ್ಪರ ಆರೋಪಗಳಿಂದ ಅಮ್ಮನನ್ನು ಕಳೆದುಕೊಂಡ ಮಗು ಮಾತ್ರ ಅನಾಥವಾಗಿದೆ.