– ಚಪ್ಪಲಿಯಲ್ಲಿ ಒಬ್ಬ ಶಾಸಕನಿಗೆ ಹೊಡೆಯಲು ಹೋಗೋದು ತಪ್ಪು: ಗೃಹ ಸಚಿವ ಗರಂ
ಬೆಂಗಳೂರು: ತೊಡೆ ತಟ್ಟೋದು, ಪ್ರಚೋದನೆ ಕೊಡೋದು ತಪ್ಪು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ, ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮೇಲೆ ಚಪ್ಪಲಿ ಎಸೆದವರ ವಿರುದ್ಧ ಖರ್ಗೆ ಅಸಮಾಧಾನ ಹೊರಹಾಕಿದರು.
ನಗರದಲ್ಲಿ ಮಾತನಾಡಿದ ಅವರು, ಜೆಡಿಎಸ್ನವರಿಗೆ ಅಸ್ತಿತ್ವದ ಪ್ರಶ್ನೆ ಇದೆ. ಅದಕ್ಕೇ ಹೀಗೆಲ್ಲ ನಮ್ಮ ಮೇಲೆ ಟೀಕೆ ಮಾಡ್ತಿದ್ದಾರೆ. ಇದು ಇಷ್ಟು ದಿನ ಇರಲಿಲ್ಲ. ಡಿಕೆಶಿ ಅವ್ರು ಸಿಎಂ ಆದ ನಂತರ ಹೀಗೆಲ್ಲ ಮಾಡ್ತಿದ್ದಾರೆ. ಚಪ್ಪಲಿಯಲ್ಲಿ ಒಬ್ಬ ಶಾಸಕನಿಗೆ ಹೊಡೆಯಲು ಹೋಗೋದು ತಪ್ಪು. ಯಾರೇ ಇರಲಿ ಪ್ರಚೋದನೆ ಕೊಡೋದು ತಪ್ಪೇ. ಎಲ್ಲರೂ ಕಾನೂನು ಇತಿಮಿತಿಯಲ್ಲಿ ಇರಬೇಕು. ತೊಡೆ ತಟ್ಟೋದು, ಪ್ರಚೋದನೆ ಕೊಡೋದು ತಪ್ಪು. ಪ್ರದೀಪ್ ಈಶ್ವರ್ ವಿರುದ್ಧ ಜನರನ್ನು ಬಿಟ್ಟು ದಾಳಿ ಮಾಡಿಸೋ ಪ್ರಯತ್ನ ಸರಿನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪ್ರದೀಪ್ ಈಶ್ವರ್ಗೆ ಚಪ್ಪಲಿ ಎಸೆತ – ನಾಲ್ವರು ಅರೆಸ್ಟ್, 150 ಮಂದಿ ವಿರುದ್ಧ ತನಿಖೆ
ಬಿಜೆಪಿ ಅಡ್ಡ ಮತ ಪ್ರಕರಣದ ವರದಿ ಸಲ್ಲಿಕೆ ಬಗ್ಗೆ ಮಾತನಾಡಿ, ಬಿಜೆಪಿಯಲ್ಲಿ ಅಡ್ಡಮತ ಆಗಿದೆ. ನಿರ್ಲಕ್ಷ್ಯದಿಂದ ಅಡ್ಡ ಮತ ಆಗಿದೆ ಅಂತ ಅವರ ವರದಿಯಲ್ಲಿ ಹೇಳಿದ್ದಾರೆ. ಯಾರ ನಿರ್ಲಕ್ಷ್ಯ? ಅವರ ಪಕ್ಷದ ನಾಯಕರ ನಿರ್ಲಕ್ಷ್ಯ ತಾನೇ? ಜವಾಬ್ದಾರಿ ತಗೊಂಡು ರಾಜೀನಾಮೆ ಕೊಡಲಿ ಬಿಜೆಪಿ ನಾಯಕರು ಎಂದು ಟಾಂಗ್ ಕೊಟ್ಟರು.

ಗ್ಯಾರಂಟಿಯಲ್ಲಿ ಗಿವ್ ಇಟ್ ಅಪ್ ಅಭಿಯಾನ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಹಾಗೇನೂ ಮಾಡ್ತಿಲ್ಲ ನಾವು. ಸರ್ಕಾರಿ ನೌಕರರು ಗ್ಯಾರಂಟಿ ತಗೋತಿದ್ದಾರೆ, ಅದು ಸರಿಯಲ್ಲ. ಸರ್ಕಾರಿ ನೌಕರರು ಗ್ಯಾರಂಟಿ ಪಡೆಯೋದು ಬಿಡಲಿ. ಸಂಪುಟ ವಿಸ್ತರಣೆ ವಿಳಂಬ ಆಗ್ತಿಲ್ಲ. ದೆಹಲಿಯಲ್ಲಿ ಚರ್ಚೆ ನಡೀತಿದೆ. ಎಷ್ಟೊಂದು ಶಾಸಕರು ಸಮರ್ಥರಿದ್ದಾರೆ ನಮ್ಮಲ್ಲಿ? ಹೊಸಬರು, ಹಳಬರು ಎಲ್ಲರೂ ಸಚಿವ ಸ್ಥಾನ ಕೇಳ್ತಿದ್ದಾರೆ. ಸಾಧಕ-ಬಾಧಕ ನೋಡಿಕೊಂಡು ವಿಸ್ತರಣೆ ಮಾಡ್ತಾರೆ ಎಂದು ತಿಳಿಸಿದರು.
ನನ್ನ ಕೆಳಗಿಳಿಸಿದ್ರು ಎಂಬ ಸಿದ್ದರಾಮಯ್ಯ ಫೇಸ್ಬುಕ್ ಪೋಸ್ಟ್ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಜನ ತಮ್ಮ ಹೃದಯದಿಂದ ಕೆಳಗಿಳಿಸಲು ಆಗಲ್ಲ. ಒಳ್ಳೆಯ ಆಡಳಿತ ಕೊಟ್ಟಿದ್ದಾರೆ ಅವರು. ಸಿದ್ದರಾಮಯ್ಯ ಅವರ ಆಶೀರ್ವಾದ ಸರ್ಕಾರಕ್ಕೆ ಇದೆ. ಸಿದ್ದರಾಮಯ್ಯ ಸಾಹೇಬರಿಗೆ ಈ ಪೋಸ್ಟ್ ಬಗ್ಗೆ ಗೊತ್ತಿರಲ್ಲ. ಆ ಪೋಸ್ಟ್ ಸಿದ್ದರಾಮಯ್ಯ ಹೆಸರಲ್ಲಿ ಯಾರು ಹಾಕ್ತಾರೆ ಎಂದು ಗೊತ್ತಿರಲ್ವಾ? ಭಾಷಣದಲ್ಲಿ ಸಿದ್ದರಾಮಯ್ಯನವರು ಹೀಗೆ ಹೇಳಿದ್ರಾ? ಭಾಷಣದಲ್ಲಿ ಅವ್ರು ಹೇಳಿದ್ರೆ ನೋಡಬಹುದಿತ್ತು, ಅವ್ರು ಭಾಷಣದಲ್ಲಿ ಹಾಗೆ ಹೇಳಿಲ್ಲ ಎಂದರು. ಇದನ್ನೂ ಓದಿ: ನನ್ನ ಬೆಂಬಲದಿಂದಲೇ ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದು: ಜಿ.ಟಿ.ದೇವೇಗೌಡ
ಆರ್ಎಸ್ಎಸ್ ನೋಂದಣಿ ಕುರಿತು ಮಾತನಾಡಿ, ನಾವು ಕಾನೂನು ಪಾಲನೆ ಮಾಡ್ತೇವೆ. ಕೋರ್ಟ್ ಆದೇಶ ಪಾಲಿಸ್ತೇವೆ. ಏನೇ ಇದ್ರೂ ಕಾನೂನಾತ್ಮಕವಾಗಿ ಎದುರಿಸ್ತೇವೆ. ನಾವು ಉಡಾಫೆ ಹೇಳಿಕೆ ಕೊಡಲ್ಲ. ಕಾನೂನು ನಮ್ಮ ಪರ ಇದೆ. ಹಾಗಾಗಿ, ನಾವು ಯಾವುದಕ್ಕೂ ಹೆದರಲ್ಲ. ಆರ್ಎಸ್ಎಸ್ನವ್ರು ನಮ್ಮ ಮಾತು, ನಿಮ್ಮ ಮಾತು, ಸಂವಿಧಾನದ ಮಾತು ಕೇಳಲ್ಲ. ಧರ್ಮಗುರುಗಳ ಮಾತಾದ್ರು ಕೇಳಲಿ. ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರೇ ಆರ್ಎಸ್ಎಸ್ ನೋಂದಣಿ ಆಗಲಿ ಅಂದಿದ್ದಾರೆ. ಧರ್ಮಗುರುಗಳ ಮಾತಾದ್ರೂ ಸಂಘದವ್ರು ಕೇಳಲಿ. ವಿಶ್ವದ ಅತೀ ದೊಡ್ಡ ಸಂಸ್ಥೆ ಯಾಕೆ ನೋಂದಣಿ ಆಗಿಲ್ಲ. ಅದರ ಲೆಕ್ಕ ಯಾರಿಡ್ತಾರೆ, ಇದನ್ನು ಕೇಳೋದೇ ತಪ್ಪಾ? ಆರ್ಎಸ್ಎಸ್ ಜತೆ ನಮ್ಮ ಸಂಘರ್ಷ ಏನೂ ಇಲ್ಲ. ಅತೀ ದೊಡ್ಡ ಸಂಸ್ಥೆ ದೊಡ್ಡ ಕಾರ್ಯಕ್ರಮಗಳನ್ನು ಮಾಡುತ್ತೆ. ಅಷ್ಟೊಂದು ಜನ ಬೀದಿಗೆ ಇಳೀತಾರೆ ಅಂದ್ರೆ ಕೇಳೋದು ತಪ್ಪಾ? ತಾವು ಯಾರು? ಕಚೇರಿ ಎಲ್ಲಿ? ನೋಂದಣಿಯಾಗಿದೆಯಾ ಅಂತ ಕೇಳೋದು ತಪ್ಪಾ? ಈ ಪ್ರಶ್ನೆ ಜನ ಕೇಳ್ತಿರೋದು ನಾವಲ್ಲ, ಜನ ಕೇಳ್ತಿದ್ದಾರೆ. ಆರ್ಎಸ್ಎಸ್ನ ವಾರ್ಷಿಕ ವರದಿಯಲ್ಲಿ ಇವೆಲ್ಲ ಪ್ರಶ್ನೆಗಳೂ ಇವೆ ಎಂದರು.
ನಾವೇ ಆರ್ಎಸ್ಎಸ್ ನೋಂದಣಿ ಮಾಡಿಸ್ತೇವೆ, ನೋಂದಣಿ ಶುಲ್ಕವನ್ನೂ ಕಟ್ತೇವೆ. ಸಣ್ಣ ಘಟನೆ ಆದರೂ ನೀವು ನಮ್ಮನ್ನ ಕೇಳ್ತೀರಾ. ಇವ್ರು ಇಷ್ಟೊಂದು ವ್ಯಾಪಕವಾಗಿ ಕಾರ್ಯಕ್ರಮ ಮಾಡ್ತಾರೆ ಅಂದರೆ ಕೇಳಬೇಕಲ್ಲ. ನೋಂದಣಿ ಮಾಡಿಸಿಕೊಳ್ಳದಿದ್ರೆ ನಾವೇ ಮಾಡಿ ಕೊಡ್ತೇವೆ. ಅದರ ಶುಲ್ಕವನ್ನೂ ನಾವೇ ಕಟ್ತೇವೆ ಎಂದು ಚಾಟಿ ಬೀಸಿದರು.
