ಬೀದರ್: ಸೀಟ್ ಬೆಲ್ಟ್ ತೆಗೆಯಲಾಗದೆ ಕಾರಿನಲ್ಲಿಯೇ ಮಹಿಳೆ ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ನಿರ್ಣಾ ಕ್ರಾಸ್ ಬಳಿ ನಡೆದಿದೆ.
ಕಲ್ಯಾಣಿ (42) ಸಜೀವ ದಹನವಾದ ಮಹಿಳೆ. ಇಂದು ಬೆಳಗ್ಗಿನ ಜಾವ ಒಂದೇ ಕುಟುಂಬದ ನಾಲ್ವರು ಹುಂಡೈ ಕಾರಿನಲ್ಲಿ ಮಹಾರಾಷ್ಟ್ರ ಉದಗೀರ್ ನಿಂದ ಹೈದರಾಬಾದ್ಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಕಾರಿನ ಹಿಂಬದಿಯ ಎಸಿ ಬಿಸಿಯಾಗಿ ಸ್ಫೋಟಗೊಂಡಿದೆ. ಪರಿಣಾಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಮಹಿಳೆ ಸಜೀವ ದಹನವಾಗಿದ್ದಾರೆ.
ಕಾರಿಗೆ ಬೆಂಕಿ ತಗುಲಿದ ಗಲಿಬಿಲಿಯಲ್ಲಿ ಸೀಟ್ ಬೆಲ್ಟ್ ತೆಗೆಯಲಾಗದೆ ಕಲ್ಯಾಣಿ ಸೀಟ್ನಲ್ಲಿಯೇ ಸಜೀವ ದಹನವಾಗಿರುವ ದೃಶ್ಯ ಎಲ್ಲರ ಕರಳು ಕಿತ್ತು ಬರುವಂತ್ತಿದೆ. ಈ ಘಟನೆಯಲ್ಲಿ ಪತಿ ಉದಯಕುಮಾರ್ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಸದ್ಯ ಮೂವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮನ್ನಾಏಖೇಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮನ್ನಾಏಖೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.