ನವದೆಹಲಿ: ಶೌಚಾಲಯದ ಬಾಗಿಲಲ್ಲಿ ಒಂದು ಬಕೆಟ್ ನೀರು ಇಟ್ಟು ಹೋದರು ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವ ನೆರೆಮನೆಯ ಮಹಿಳೆಗೆ ಚಾಕು ಇರಿದು ಕೊಲೆಗೈದ ಭಯಾನಕ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ದೆಹಲಿಯ ರಂಗಪುರಿ ಪಹಾರಿ ಪ್ರದೇಶದಲ್ಲಿ ಶುಕ್ರವಾರದಂದು ಈ ಘಟನೆ ನಡೆದಿದೆ. ರಂಗಪುರಿ ಪಹಾರಿ ನಿವಾಸಿ ಗೋಪಾಲ್ ಸಿಂಗ್ ಅದೇ ಪ್ರದೇಶದ ರೇಖಾ ಕೌರ್ ಅವರನ್ನು ಚಾಕು ಇರಿದು ಕೊಲೆ ಮಾಡಿದ್ದಾನೆ. ಶೌಚಾಲಯದ ಬಾಗಿಲ ಮುಂದೆ ರೇಖಾ ನೀರು ತುಂಬಿದ್ದ ಬಕೆಟ್ ಇಟ್ಟು ಹೋಗಿದ್ದಾರೆಂಬ ಕಾರಣಕ್ಕೆ ಗೋಪಾಲ್ ಕೋಪಗೊಂಡಿದ್ದಾನೆ. ಬಳಿಕ ಈ ಬಗ್ಗೆ ಮಹಿಳೆ ಬಳಿ ಜಗಳವನ್ನೂ ಕೂಡ ಮಾಡಿದ್ದಾನೆ. ಆದರೆ ಕೊನೆಗೆ ಜಗಳ ತಾರಕ್ಕಕ್ಕೇರಿ ಮಹಿಳೆಗೆ ಚಾಕು ಇರಿದು ಆರೋಪಿ ಕೊಲೆ ಮಾಡಿದ್ದಾನೆ.
ಆರೋಪಿ ಯಾವಾಗಲು ನೆರೆಹೊರೆಯವರ ಜೊತೆ ಪದೇ ಪದೇ ಜಗಳಾವಾಡುತ್ತಿದ್ದ. ಅಲ್ಲದೆ ಕೆಲ ದಿನಗಳಿಂದ ರೇಖಾ ಟ್ಯಾಂಕರ್ ನಲ್ಲಿ ಬರುತ್ತಿದ್ದ ನೀರನ್ನು ಹೆಚ್ಚು ಬಳಸುತ್ತಾರೆ ಎಂದು ಆರೋಪಿ ಕ್ಯಾತೆ ತೆಗೆದಿದ್ದ. ಅಲ್ಲದೆ ನೀರಿಗಾಗಿ ಅವರಿಬ್ಬರ ನಡುವೆ ಜಗಳ ಕೂಡ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಸದ್ಯ ಈ ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.