ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ ಟಿಪ್ಪು ಡ್ರಾಪ್ ನಿಂದ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಬಂದಿದ್ದ ಮಾಲೂರು ಮೂಲದವರು ಎನ್ನಲಾದ ಶ್ವೇತ(35) ಮೃತ ಮಹಿಳೆ ಎಂದು ತಿಳಿದುಬಂದಿದೆ. ಆಟೋದಲ್ಲಿ ನಂದಿಗಿರಿಧಾಮಕ್ಕೆ ಬಂದಿದ್ದ ಶ್ವೇತ ಆತ್ಮಹತ್ಯೆ ಮಾಡಿಕೊಂಡಿದ್ದು, ತದನಂತರ ಆಟೋ ಚಾಲಕ ಏಕಾಂಗಿಯಾಗಿ ವಾಪಸ್ಸಾಗುತ್ತಿದ್ದಾಗ ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸಾಕಷ್ಟು ಹರಸಾಹಸಪಟ್ಟು ಮೃತದೇಹ ಹೊರತರಲು ಪೊಲೀಸರು ಮುಂದಾಗಿದ್ದು, ಆಟೋ ಚಾಲಕನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.