ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದ ಬಳಿ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಮುಂದಾದ ಸರಗಳ್ಳನನ್ನ ಆ ಮಹಿಳೆಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಂಗಳೂರಿನ ರಾಜಾಜಿನಗರದ ನಿವಾಸಿ ನವ್ಯಾ ಎಂಬವರು ಕಳ್ಳನನ್ನು ಹಿಡಿದ ದಿಟ್ಟ ಮಹಿಳೆ. ಪಾಂಡವಪುರ ತಾಲೂಕಿನ ಸಣಬ ಗ್ರಾಮದ ರಾಜು ಎಂಬಾತ ಬಂಧಿತ ಆರೋಪಿ. ಇಂದು ನವ್ಯಾ ಅವರು ನಿಮಿಷಾಂಬ ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ರಾಜು ಅವರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಮುಂದಾಗಿದ್ದನು. ಈ ವೇಳೆ ಎಚ್ಚೆತ್ತ ನವ್ಯಾ ಕಳ್ಳ ರಾಜುನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ರಾಜುನನ್ನು ಹಿಡಿಯಲು ಸಹಕರಿಸಿದ್ದಾರೆ.
ನಂತರ ಆರೋಪಿ ರಾಜುನನ್ನು ಶ್ರೀರಂಗಪಟ್ಟಣ ಪೊಲೀಸರ ವಶಕ್ಕೆ ನೀಡಲಾಗಿದೆ.