ಬೆಂಗಳೂರು: ಶುಕ್ರವಾರ ಸಿನಿಮಾ ನಿಗದಿಯಂತೆ ಬಿಡುಗಡೆಯಾಗಲಿದೆ. ನಮಗೆ ಮಾಧ್ಯಮಗಳ ಮೂಲಕವೇ ನ್ಯಾಯಾಲಯ ನೀಡಿದ ತಡೆಯಾಜ್ಞೆ ಬಗ್ಗೆ ಮಾಹಿತಿ ಬಂದಿದೆ. ಇದೂವರೆಗೂ ನಮ್ಮ ಕೈಗೆ ನ್ಯಾಯಾಲಯದ ನೋಟಿಸ್ ತಲುಪದ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ತಿಳಿಸಿದ್ದಾರೆ.
ಸಿನಿಮಾವನ್ನು ಎಲ್ಲ ವಿತರಕರಿಗೆ ವಿತರಣೆ ಮಾಡಲಾಗಿದೆ. ಶುಕ್ರವಾರ ಬೆಳಗಿನ ಜಾವವೇ ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗಿದೆ. ಅರ್ಜಿದಾರರಾದ ವೆಂಕಟೇಶ್ ಮತ್ತು ಆನಂದ್ ಎಂಬವರ ಪರಿಚಯವೇ ನನಗಿಲ್ಲ. ಸಿನಿಮಾ ನೋಡದೆಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರೋದು ತಪ್ಪು. ಈ ವಿಷಯದ ಬಗ್ಗೆ ಕೆಜಿಎಫ್ ಚಿತ್ರತಂಡಕ್ಕೆ ಗೊತ್ತಿಲ್ಲ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ನ್ಯಾಯಾಲಯಕ್ಕೆ ನಾವು ಗೌರವವನ್ನು ನೀಡುತ್ತೇವೆ. ನಿರ್ದೇಶಕ ಪ್ರಶಾಂತ್ ನೀಲ್ ಸಹ ರೌಡಿ ತಂಗಂ ಜೀವನಾಧರಿತ ಕಥೆ ಅಂತಾ ಹೇಳಿಲ್ಲ. ಈ ಬಗ್ಗೆ ಚಿತ್ರ ತಂಡದಲ್ಲಿ ಚರ್ಚೆಯೂ ನಡೆದಿಲ್ಲ. ಈ ಮೊದಲು ಅರ್ಜಿದಾರರು ಅಂತ ಹೇಳಿಕೊಳ್ಳುವ ವೆಂಕಟೇಶ್ ಮತ್ತು ಆನಂದ್ ನಮ್ಮನ್ನ ಸಂಪರ್ಕ ಮಾಡಿಲ್ಲ ಅಂತಾ ಅಂದ್ರು.