ಚಿಕ್ಕಮಗಳೂರು: 2023 ರಲ್ಲಿ ಮಾನ್ಯಗೊಂಡು 2026ರಲ್ಲಿ ಅಮಾನ್ಯವಾಗಿ ಶಾಸಕರೇ ಬದಲಾಗಿ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಶೃಂಗೇರಿ (Sringeri) ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆ ವಿವಾದ ಕುರಿತಂತೆ ಇಂದು ಸುಪ್ರೀಂ ಕೋರ್ಟ್ನಲ್ಲಿ (Supreme Court) ವಿಚಾರಣೆ ನಡೆಯಲಿದೆ.
2023ರ ಸಾರ್ವತ್ರಿಕ ಚುನಾವಣಾ ಫಲಿತಾಂಶದಲ್ಲಿ (Election Result) ಶೃಂಗೇರಿಯ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ ರಾಜೇಗೌಡ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿ ಬಿಜೆಪಿಯ ಡಿ.ಎನ್ ಜೀವರಾಜ್ ಅಂಚೆ ಮತಗಳ ಮರು ಎಣಿಕೆಗೆ ಪಟ್ಟು ಹಿಡಿದು, ಕೋರ್ಟ್ ಮೊರೆ ಹೋಗಿದ್ದರು. 3 ವರ್ಷಗಳ ಕಾಲ ವಿಚಾರಣೆ ನಡೆದು ಅಂತಿಮವಾಗಿ ಹೈಕೋರ್ಟ್ (Karnataka Highcourt) ಅಂಚೆ ಮತಗಳ ಮರು ಮತಗಳ ಮರು ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ಆದೇಶಿಸಿತ್ತು.

ಮೇ 2ರಂದು ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಡಿ.ಎನ್ ಜೀವರಾಜ್ 52 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 3 ವರ್ಷ ಶಾಸಕರಾಗಿದ್ದ ಕಾಂಗ್ರೆಸ್ಸಿನ ರಾಜೇಗೌಡ 255 ಮತಗಳಿಂದ ಸೋತಿದ್ದರು. ಡಿ.ಎನ್.ಜೀವರಾಜ್ ಪ್ರಮಾಣ ವಚನ ಕೂಡ ಸ್ವೀಕರಿಸಿದ್ದರು. ಆದರೆ, ಹೈಕೋರ್ಟ್ ಆದೇಶದಂತೆ ನಡೆದ ಅಂಚೆ ಮತ ಮರು ಎಣಿಕೆ ಫಲಿತಾಂಶದ ಬಗ್ಗೆ ಪರಾಜಿತ ಅಭ್ಯರ್ಥಿ ಟಿ.ಡಿ ರಾಜೇಗೌಡ ಸುಪ್ರೀಂ ಕೋರ್ಟ್ ಕದ ಬಡಿದಿದ್ದರು.

ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ಬ್ರೇಕ್ ಹಾಕಿ ಟಿ.ಡಿ ರಾಜೇಗೌಡ ಶಾಸಕ ಸ್ಥಾನ ಮುಂದುವರಿಸುವಂತೆ ಆದೇಶಿಸಿತ್ತು. ಇದೇ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಯಲಿದೆ. ಹೈಕೋರ್ಟ್ ಆದೇಶ ಹಾಗೂ ಚುನಾವಣಾ ಆಯೋಗ ಪ್ರಕಟಿಸಿದ ಫಲಿತಾಂಶ ಕುರಿತಂತೆ ಚರ್ಚೆ ನಡೆಯಲಿದೆ. ಅಂಚೆ ಮತ ಮರು ಎಣಿಕೆಗೂ ಮುನ್ನ ಬ್ಯಾಲೆಟ್ ಪೇಪರ್ ಇದ್ದ ಬಾಕ್ಸ್ ಓಪನ್ ಆಗಿವೆ, ವೋಟ್ ಟ್ಯಾಂಪರಿಂಗ್ ಆಗಿದೆ ಎಂದು ಟಿ.ಡಿ ರಾಜೇಗೌಡ ಆರೋಪಿಸಿದ್ದರು. ಇಂದು ನಡೆಯುವ ವಿಚಾರಣೆ ವೇಳೆ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಆದೇಶದ ಅನ್ವಯ 2023 ಹಾಗೂ 2026ರ ಮತ ಎಣಿಕೆಯ ದಾಖಲೆಗಳನ್ನು ಸುಪ್ರೀಂ ಕೋರ್ಟ್ ಮುಂದೆ ಹಾಜರುಪಡಿಸಿದೆ. ಆದರೆ, ಶೃಂಗೇರಿ ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಬ್ಬರೂ ಸತ್ಯಕ್ಕೆ ಜಯ ಸಿಗಲಿದೆ ಎಂದು ಸುಪ್ರೀಂ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ.
