– ಹಸುಗಳ ಮಾಲೀಕನಿಗೆ ಎರಡು ಕಾಲುಗಳು ಮುರಿತ
ಬೆಂಗಳೂರು: ನಗರದಲ್ಲಿ ಸಂಜೆ ಸುರಿದ ಧಾರಾಕಾರ ಮಳೆಗೆ ದೊಮ್ಮಲೂರಿನಲ್ಲಿ ಗೋಡೆ ಕುಸಿದು ನಾಲ್ಕು ಹಸು ಹಾಗೂ ಒಂದು ಕರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಹಸುಗಳ ಮಾಲೀಕನಿಗೆ ಎರಡು ಕಾಲುಗಳ ಮುರಿತ ಆಗಿದೆ.
ದೊಮ್ಮಲೂರು ಒಂದನೇ ಕ್ರಾಸ್ನಲ್ಲಿ ಆದ ದುರ್ಘಟನೆ ಇದಾಗಿದೆ. ಸಂಜೆ ಸುರಿದ ಮಳೆಗೆ ಮಿಲ್ಟ್ರಿ ಕಾಂಪೌಂಡ್ ಗೋಡೆ ಕುಸಿತವಾಯಿತು. ಹಸು ಮಾಲೀಕ ಮುನಿರಾಜುಗೆ ಕಾಲು ಮುರಿದಿದ್ದು, ಗಾಯಗಳಾಗಿವೆ. ಮತ್ತೊಂದು ಹಸು ಗಾಯಗೊಂಡು ನರಳಾಡಿದೆ.
ಸಂಜೆ 6:30 ರ ಸುಮಾರಿಗೆ ಹಾಲು ಕರೆಯಲು ಹಸು ಮಾಲೀಕ ಮುನಿರಾಜು ಹೋದಾಗ ಘಟನೆ ನಡೆದಿದೆ. ಕಾಲು ಮುರಿದುಕೊಂಡಿರುವ ಮುನಿರಾಜು ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಬನ್ನೇರುಘಟ್ಟ ರಸ್ತೆಯ ತಾವರೆಕೆರೆ ಮೆಟ್ರೋ ನಿಲ್ದಾಣ, ದಾಸರಹಳ್ಳಿ ಭಾಗದ ಬಗಲಗುಂಟೆಯ ಭೈರವೇಶ್ವರ ನಗರ, ಶೇಷಾದ್ರಿ ಲೇಔಟ್ನಲ್ಲಿ ರಸ್ತೆಗಳು ಜಲಾವೃತವಾಗಿ 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತು. ಇದಕ್ಕೆ ರಾಜಕಾಲುವೆ ಕಾಮಗಾರಿ ಕಾರಣ ಎನ್ನಲಾಗಿದೆ. ಸುಲ್ತಾನ್ಪಾಳ್ಯ, ಕಾಮರಾಜ ರಸ್ತೆಯಲ್ಲೂ ಅವಾಂತರ ಇತ್ತು.

