ಧಾರವಾಡ: ನಾವು ಪಂಚರ್ ತೆಗೆಯುವವರು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಇದೊಂದು ಕೋಮು ಶಬ್ದ. ನಾವೆಲ್ಲ ಪಂಚರ್ ವಾಲಾಸ್. ಅವರು ನಮ್ಮ ಆರ್ಥಿಕತೆಯನ್ನು ಪಂಚರ್ ಮಾಡುತ್ತಿದ್ದಾರೆ. ಅದನ್ನು ರಿಪೇರಿ ಮಾಡಲು ನಾವು ಪಂಚರ್ ವಾಲಾಸ್ ಆಗಿದ್ದೇವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಭವ್ಯಾ ನರಸಿಂಹಮೂರ್ತಿ ವಾಗ್ದಾಳಿ ನಡೆಸಿದ್ದಾರೆ.
ಎನ್ಆರ್ಸಿ, ಸಿಎಎ ಮತ್ತು ಎನ್ಪಿಆರ್ ಖಂಡಿಸಿ ಧಾರವಾಡದಲ್ಲಿ ‘ವಿ ದಿ ಪೀಪಲ್ ಆಫ್ ಇಂಡಿಯಾ’ ಸಂಘಟನೆಯಿಂದ ಮಹಿಳಾ ಸಮಾವೇಶವನ್ನು ಏರ್ಪಡಿಸಲಾಗಿತ್ತು. ನಗರದ ಅಂಜುಮನ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 3 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಸಮಾವೇಶದ ವೇದಿಕೆ ಮೇಲೆ ಕವಿತಾ ರೆಡ್ಡಿ, ಬಿ. ಆರ್ ಅಪರ್ಣಾ, ಭವ್ಯಾ ನರಸಿಂಹಮೂರ್ತಿ ಸೇರಿ ಹಲವರು ಕೇಂದ್ರ ಸರ್ಕಾರದ ಎನ್ಆರ್ಸಿ, ಸಿಎಎ ಹಾಗೂ ಎನ್ಪಿಆರ್ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಭವ್ಯಾ ನರಸಿಂಹಮೂರ್ತಿ ಮಾತನಾಡಿ, ಈ ಕಾಯ್ದೆಗೆ ಬೆಂಬಲ ನೀಡಲು ಅಮಿತ್ ಶಾ ಅವರು ಒಂದು ನಂಬರ್ ಕೊಟ್ಟು ಮಿಸ್ ಕಾಲ್ ಕೊಡಲು ಹೇಳಿದ್ದರು. ಬಳಿಕ ಅದಕ್ಕೆ 52 ಲಕ್ಷ ಮಿಸ್ ಕಾಲ್ ಬಂದಿದೆ ಎಂದರು. ಸರ್ಕಾರದ ಬಳಿ ಬಹುಮತವಿದೆ. ಅದಕ್ಕೆ ನಾವು ಈ ಕಾಯ್ದೆಯನ್ನು ತರುತ್ತೇವೆ ಎಂದು ಅವರು ಅಂತಿದ್ದಾರೆ. ಈ ಸರ್ಕಾರ ಬರಲು ನಾವೇ ಕಾರಣ ಎಂಬುದನ್ನು ಅವರು ಮರೆತಿದ್ದಾರೆಂದು ಹರಿಹಾಯ್ದರು.
ಸಿಎಎ, ಎನ್ಆರ್ಸಿ ಕಾಯ್ದೆಗೆ ದೊಡ್ಡ ತಜ್ಞರು ಹಾಗೂ ಮೈಕ್ರೋಸಾಫ್ಟ್ ಸಿಇಒ ಕೂಡಾ ವಿರೋಧ ಮಾಡಿದ್ದಾರೆ. ಈ ಕಾಯ್ದೆ ಬಂದರೆ ಈ ದೇಶಕ್ಕೆ ಎಂಥ ಅಪಘಾತ ಕಾದಿದೆ ಎಂದು ಅವರಿಗೆ ಗೊತ್ತು ಎಂದು ಮಾತಿನ ಚಾಟಿ ಬೀಸಿದರು.