ಬೆಂಗಳೂರು: ಮುಂದಿನ ಕಾವೇರಿ ನೀರಿನ ಲಭ್ಯತೆ ಸವಾಲಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಕುಡಿಯುವ ನೀರಿನ ಸಮರ್ಪಕ ಬಳಕೆಗೆ ಹೊಸ ಮಾರ್ಗಸೂಚಿಗಳನ್ನು (Guidelines) ಬಿಡುಗಡೆ ಮಾಡಲು ಜಲಮಂಡಳಿ (BWSSB) ಸಿದ್ಧತೆ ನಡೆಸಿದೆ.
ಜಲಮಂಡಳಿ ಅಧ್ಯಕ್ಷೆ ಮಂಜುಳಾ ಅವರ ಈ ಬಗ್ಗೆ ʻಪಬ್ಲಿಕ್ ಟಿವಿʼಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಕಾವೇರಿ ಜಲಾಶಯಗಳಲ್ಲಿ ಸುಮಾರು 17 ಟಿಎಂಸಿ ನೀರು ಲಭ್ಯವಿದೆ. ಆದರೆ ಈ ನೀರು ಕೇವಲ ಬೆಂಗಳೂರಿಗಷ್ಟೇ ಅಲ್ಲದೇ ಮಂಡ್ಯ, ಮೈಸೂರು ಸೇರಿದಂತೆ ಹಲವು ನಗರಗಳು ಮತ್ತು ಜಿಲ್ಲೆಗಳಿಗೂ ಪೂರೈಕೆಯಾಗಬೇಕಿರುವುದರಿಂದ ನೀರಿನ ಬಳಕೆಯಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನ ಜಾರಿಗೆ ತರುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಕುಡಿಯುವ ನೀರಿನ (Drinking Water) ಅಗತ್ಯಕ್ಕೆ ಸುಮಾರು 2.2 ಟಿಎಂಸಿ ನೀರು ಬೇಕಾಗುತ್ತದೆ. ಹೀಗಾಗಿ ನೀರಿನ ಅನಗತ್ಯ ಬಳಕೆಯನ್ನ ತಡೆಯುವ ಉದ್ದೇಶದಿಂದ ಶೀಘ್ರದಲ್ಲೇ ಹೊಸ ಮಾರ್ಗಸೂಚಿಗಳನ್ನ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಜಲಮಂಡಳಿಯಿಂದ ಏನೇನು ಮಾರ್ಗಸೂಚಿಗೆ ಸಿದ್ಧತೆ?
1. ಕುಡಿಯುವ ನೀರನ್ನ ಅನ್ಯ ಬಳಕೆಗೆ ಬಳಸಬಾರದು
2. ಕಟ್ಟಡ ನಿರ್ಮಾಣಕ್ಕೆ ಬಳಸಬಾರದು
3. ವಾಹನಗಳ ಸ್ವಚ್ಛತೆಗೆ ಬಳಸಬಾರದು
4. ಹೆಚ್ಚು ಹೆಚ್ಚು ಏರೀಯೇಟರ್ಗಳ ಅಳವಡಿಕೆಗೆ ನಿರ್ಧಾರ
5. ಕೊರತೆ ಇರುವ ಕಡೆ ಟ್ಯಾಂಕರ್ ಗಳಲ್ಲಿ ನೀರು ಪೂರೈಕೆ
6. ಅಗತ್ಯವಿರುವ ಸ್ಥಳಗಳಲ್ಲಿ ರೀ-ಬೋರ್ವ್ಯವಸ್ಥೆಗೆ ಕ್ರಮ ವಹಿಸಲಾಗಿದ್ದು, ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುವುದಾಗಿ ಜಲಮಂಡಳಿ ಎಚ್ಚರಿಕೆ ನೀಡಿದೆ.
600 ಕೋಟಿ ದಂಡ ಸಂಗ್ರಹ
ಇನ್ನೂ ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸಿದವರ ವಿರುದ್ಧ ಈಗಾಗಲೇ ದಂಡ ವಿಧಿಸಲಾಗಿದ್ದು, ಸುಮಾರು 600 ಕೋಟಿ ರೂ. ದಂಡದ ಮೊತ್ತ ಸಂಗ್ರಹಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷೆ ಮಂಜುಳಾ ತಿಳಿಸಿದ್ದಾರೆ.
