ಚಿಕ್ಕಮಗಳೂರು: ಅಧಿಕಾರಕ್ಕೆ ಯಾವುದೇ ಸಂಚಕಾರ ಬಾರದಂತಿರಲಿ, ಉಳಿದ ಮೂರುವರೇ ವರ್ಷ ನಾನೇ ಸಿಎಂ ಆಗಿರಲೆಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಾಲ್ಕೈದು ಹೋಮ-ಹವನ, ಯಾಗ-ಯಜ್ಞವನ್ನು ಮಾಡಿದ್ದಾರೆ ಎನ್ನಲಾಗಿದೆ. ಆದರೆ ಯಜ್ಞದ ಬೆನ್ನಲ್ಲೇ ಸಿಎಂಗೆ ಅವಧೂತ ವಿನಯ್ ಗುರೂಜಿ ಎಚ್ಚರದಿಂದ ಹೆಜ್ಜೆ ಇಡಿ ಎಂದಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ಆಶ್ರಮದಲ್ಲಿ ಅವಧೂತ ವಿನಯ್ ಗುರೂಜಿಯ ಸ್ವರ್ಣ ಪೀಠಿಕೇಶ್ವರಿ ಆಶ್ರಮದಲ್ಲಿ ಸಿಎಂ ಯಡಿಯೂರಪ್ಪ, ಶತರುದ್ರಯಾಗ, ವಿಷ್ಣು ಸಹಸ್ರ ನಾಮ, ಮೃತ್ಯುಂಜಯ ಹೋಮ, ಲಲಿತ ಸಹಸ್ರನಾಮ ಹಾಗೂ ಗಣಪತಿ ಹೋಮ ನಡೆಸಿದರು.
ವಿನಯ್ ಗುರೂಜಿಯ ಹೋಮದ ಮುಂದಾಳತ್ವ ವಹಿಸಿ, 45 ಪುರೋಹಿತರ ನೇತೃತ್ವದಲ್ಲಿ ಸುಮಾರು ಆರು ಗಂಟೆ ಹೋಮ-ಹವನ ಮಾಡಿಸಿದರು. ಆದರೆ ಹೋಮ ಮುಗಿದು ಸಿಎಂ ಹೊರಡುತ್ತಿದ್ದಂತೆ, ಕಾರಿನ ಬಳಿ ಬಂದ ವಿನಯ್ ಗುರೂಜಿ, ಸಿಎಂ ಯಡಿಯೂರಪ್ಪಗೆ ತಬ್ಬಿಕೊಂಡು ನೆತ್ತಿಗೆ ಮುತ್ತಿಟ್ಟಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೂ ಮೊದಲು ಎಚ್ಚರ, ಎಚ್ಚರದ ಹೆಜ್ಜೆ ಇಡು ಎಂದು ಸಲಹೆ ನೀಡಿದರು.
ಇದರ ಬೆನ್ನೆಲ್ಲೇ ಹೀಗೆ ಬಾಚಿ ತಬ್ಬಿ ಮುತ್ತಿಕ್ಕಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಯಡಿಯೂರಪ್ಪ ಅವರಿಗೆ ಅಧಿಕಾರ ಸಲೀಸಾಗಿಲ್ವಾ, ಅವರ ಮುಖ್ಯಮಂತ್ರಿ ಹಾದಿಯಲ್ಲೂ ಕಲ್ಲು-ಮುಳ್ಳುಗಳಿದ್ಯಾ, ಬಿಜೆಪಿ ಆಂತರಾಳದಲ್ಲಿ ಬಿಎಸ್ವೈ ಬಗ್ಗೆ ಏನಿದ್ಯೋ, ಅವಧೂತರಿಗೆ ಎಲ್ಲವೂ ಗೊತ್ತಿದ್ಯಾ ಎಂಬ ಹಲವು ಪ್ರಶ್ನೆಗಳು ಉದ್ಭವವಾಗಿವೆ.
ವಿನಯ್ ಗುರುಜಿ ಎಚ್ಚರ ಎಂದಿದ್ದು ಉತ್ತರದ ನೆರೆ, ದಕ್ಷಿಣದ ಮಳೆಯ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಡುವುದರಲ್ಲಿ ಎಚ್ಚರ ಎಂದರೋ ಅಥವಾ ನಿಮ್ಮ ಸಿಎಂ ಹಾದಿಯಲ್ಲೇ ಅನಾನುಕೂಲಗಳಿವೆ ಎಚ್ಚರ ಎಂದರೋ ಗೊತ್ತಿಲ್ಲ. ಆದರೆ ಎಚ್ಚರ ಎಂದು ತಬ್ಬಿಕೊಂಡು ನೆತ್ತಿಗೆ ಮುತ್ತಿಕ್ಕಿರೋದು ಮಾತ್ರ ಬಿಎಸ್ವೈ ಆತಂಕಕ್ಕಂತೂ ದೂಡಿದೆ.