ಚಿಕ್ಕಮಗಳೂರು: ನನ್ನ ಪ್ರಕಾರ ಮಾರ್ಚ್ ಅಥವಾ ಮೇ ತಿಂಗಳ ಹೊತ್ತಿಗೆ ಕೊರೊನಾ ಇಡೀ ದೇಶದಿಂದ ದೂರವಾಗಬಹುದು ಎಂದು ಗೌರಿಗದ್ದೆ ಗ್ರಾಮದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ತಾಲೂಕಿನ ಮುಳ್ಳಯ್ಯನಗಿರಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇನ್ನೂ ಮೂರ್ನಾಲ್ಕು ತಿಂಗಳು ಕೊರೊನಾ ಇರಬಹುದು. ನನ್ನ ಪ್ರಕಾರ ಮಾರ್ಚ್, ಮೇ ವೇಳೆಗೆ ಕೊರೊನಾ ನಿಯಂತ್ರಣಕ್ಕೆ ಬರಬಹುದು ಎಂದಿದ್ದಾರೆ. ಇದನ್ನೂ ಓದಿ: ಮೃತ ವ್ಯಕ್ತಿಯ ಹೆಸರಿನಲ್ಲಿ ಬಂತು ಕೋವಿಡ್ ಲಸಿಕೆ ಪಡೆದ ಪ್ರಮಾಣಪತ್ರ!
ಮನುಷ್ಯನಿಗೆ ಆತ್ಮಸ್ಥೈರ್ಯ ಮುಖ್ಯ. ಜನ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಎಲ್ಲವನ್ನೂ ದೇವರು ನೋಡಿಕೊಳ್ತಾನೆ. ಮ್ಯಾಜಿಕ್ ಆಗಲಿ, ಪವಾಡ ಆಗಲಿ ಅಂದರೆ ಯಾವುದು ಆಗುವುದಿಲ್ಲ. ಇದರಿಂದ ಹೊರ ಬರಲು ನಾವು ಪ್ರಯತ್ನ ಪಡುವುದೇ ನಿಜವಾದ ಪವಾಡ ಎಂದು ತಿಳಿಸಿದ್ದಾರೆ.
ಜನ, ಸರ್ಕಾರ, ಪಕ್ಷಗಳು ಎಲ್ಲರೂ ಒಬ್ಬರನ್ನೊಬ್ಬರು ದೂರಿಕೊಳ್ಳುವುದು ಸರಿಯಲ್ಲ. ಎಲ್ಲಾ ಜನರನ್ನು ರಕ್ಷಿಸಬೇಕು ಎಂದು ಒಮ್ಮತದಿಂದ ಕೆಲಸ ಮಾಡಬೇಕು. ಆಗ ಮಾತ್ರ ಎಲ್ಲರೂ ಆರೋಗ್ಯವಾಗಿರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ದತ್ತಪೀಠ ವಿಚಾರವಾಗಿ ಸರ್ಕಾರಕ್ಕೆ ಮನವಿ ಮಾಡಿದ ವಿನಯ್ ಗುರೂಜಿ, ದತ್ತಪೀಠವನ್ನು ಪ್ರಾಧಿಕಾರ ಮಾಡಿ ಅಭಿವೃದ್ಧಿಗೊಳಿಸಬೇಕು. ನಾನು ಗುರು ಎನ್ನುವುದಕ್ಕಿಂತ ಒಬ್ಬ ಸಾಮಾನ್ಯನಾಗಿ ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ದತ್ತಪೀಠದಲ್ಲಿ ಶೌಚಾಲಯಗಳನ್ನು ಮತ್ತಷ್ಟು ನಿರ್ಮಾಣ ಮಾಡಬೇಕು. ಈ ಕುರಿತು ಮುಖ್ಯಮಂತ್ರಿ ಹಾಗೂ ಪ್ರವಾಸೋದ್ಯಮ ಸಚಿವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಮಕ್ಕಳಿಗೂ ವಕ್ಕರಿಸಿತು ಹೊಸ ತಳಿ- ಮಹಾರಾಷ್ಟ್ರದಲ್ಲಿ 3 ವರ್ಷದ ಮಗುವಿನಲ್ಲಿ ಓಮಿಕ್ರಾನ್ ಪತ್ತೆ
ನಾನೇ ಸ್ವತಃ ಶೌಚಾಲಯಗಳನ್ನು ಶುಚಿಗೊಳಿಸಿ ಬಂದಿದ್ದೇನೆ. ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕಿದೆ. ವಾರಾಂತ್ಯದಲ್ಲಿ ಈ ಭಾಗಕ್ಕೆ 2,000ಕ್ಕೂ ಹೆಚ್ಚು ವಾಹನಗಳಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಇನ್ನಷ್ಟು ಮೂಲ ಸೌಕರ್ಯಗಳನ್ನು ಒದಗಿಸಬೇಕು. ದುಡ್ಡಿದ್ದವರು ರೆಸಾರ್ಟ್, ಲಾಡ್ಜ್, ಹೋಂ ಸ್ಟೇಗೆ ಹೋಗುತ್ತಾರೆ. ಆದರೆ ಬಡವರು ಎಲ್ಲಿಗೆ ಹೋಗಬೇಕು? ಬಡವರು ದೇವಸ್ಥಾನ, ಪ್ರವಾಸಕ್ಕೆ ಹೋಗಬಾರದು ಎಂದು ಕಾನೂನಿಲ್ಲ, ಎಲ್ಲರೂ ಒಂದೇ. ಆದ್ದರಿಂದ ಮುಂದಿನ ದಿನಗಳಲ್ಲಿ ಮೂಲ ಸೌಕರ್ಯಗಳನ್ನು ಇಲ್ಲಿ ಸರ್ಕಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.