– ಕಣ್ಮನ ಸೆಳೆದ ಮಾಗೋಡು ಜಲಪಾತ
ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣ ಅಬ್ವರಿಸುತ್ತಿದ್ದು, ಶಿರಸಿಯ (Sirsi) ಕುಳವೆ ಗ್ರಾಪಂ ವ್ಯಾಪ್ತಿಯ ಕಾಗೇರಿ ಗ್ರಾಮದಲ್ಲಿ ಪ್ರವಾಹ ಸೃಷ್ಟಿಯಾಗಿದೆ.
ಕಾಗೇರಿ ಗ್ರಾಮದ ಬರೂರು ಹೊಳೆ ಉಕ್ಕಿ ಭತ್ತದ ಗದ್ದೆ, ತೋಟಗಳು ಜಲಾವೃತವಾಗಿದ್ದು, ಕಳೆದ ಎರಡು ದಿನದಿಂದ ಅಬ್ಬರಿಸಿದ ಮಳೆಗೆ ಉಕ್ಕಿ ಹರಿದ ಬರೂರು ಹೊಳೆ ಪ್ರವಾಹಕ್ಕೆ ಭತ್ತದ ಬೆಳೆ, ತೋಟಗಳು ಜಲಾವೃತವಾಗಿದೆ. ಇದಲ್ಲದೇ ಇದೇ ಗ್ರಾಮದ ಬಳಿ ರಸ್ತೆಯೂ ಜಲಾವೃತಗೊಂಡಿದೆ. ಅಘನಾಶಿನಿ ನದಿ ನೀರಿನ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ನದಿಯಲ್ಲಿ ಹಾವುಗಳು ಹರಿದು ಬರುತ್ತಿದ್ದು, ಹೊಸಗದ್ದೆ ಬಳಿ ನದಿಯಲ್ಲಿ ಹನ್ನೆರಡು ಅಡಿ ಉದ್ದದ ಹೆಬ್ಬಾವೊಂದು ತೇಲಿ ಬಂದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದಿಂದ ಹೆಬ್ಬಾವು ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಭೀಕರ ದುರಂತ – ಟಾಟಾ ಸುಮೋ ಮೇಲೆ ಬಂಡೆ ಬಿದ್ದು 13 ಮಂದಿ ದುರ್ಮರಣ

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡಕುಸಿತ
ಕಾರವಾರ ತಾಲೂಕಿನ ಮುದುಗಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೂಕುಸಿತವಾಗಿದೆ. ಭೂಕುಸಿತದಿಂದ ಹೆದ್ದಾರಿಯಲ್ಲಿ ಕಲ್ಲುಬಂಡೆಗಳು ಉರುಳಿ ಬಿದ್ದಿವೆ. ಈ ಮಾರ್ಗದಲ್ಲಿ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಯಾವುದೇ ಸಮಸ್ಯೆಗಳಾಗಿಲ್ಲ. ಇನ್ನು ಜೋಯಿಡಾದ ಕುಂಬಾರವಾಡದ ಕಾತೇಲಿಯ ವಿನಂತಿ ವಿನಾಯಕರಾವ್ ಎಂಬವರ ಮನೆಯ ಮೇಲೆ ಅಡಿಕೆ ಮರ ಬಿದ್ದು, ಸಾವಿರಾರು ರೂಪಾಯಿ ವಸ್ತುಗಳು ಹಾನಿಯಾಗಿವೆ. ಅದೃಷ್ಟವಶಾತ್ ಮನೆಯವರು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಅಬ್ಬರದ ಮಳೆಯಿಂದಾಗಿ ಯಲ್ಲಾಪುರದಿಂದ ಸುಮಾರು 20 ಕಿಮೀ ದೂರದಲ್ಲಿರುವ ಮಾಗೋಡು ಜಲಪಾತವು (Magodu Falls) ಇದೀಗ ತನ್ನ ಪ್ರಕೃತಿ ಸೊಬಗನ್ನ ಹೆಚ್ಚಿಸಿಕೊಂಡು ಮೈದುಂಬಿ ಹರಿಯುತ್ತಿದೆ. ದಟ್ಟ ಅರಣ್ಯದ ನಡುವೆ ಬೇಡ್ತಿ ನದಿಯು ಸುಮಾರು 200 ಮೀಟರ್ ಎತ್ತರದಿಂದ ಎರಡು ಹಂತಗಳಲ್ಲಿ ಧುಮುಕುವ ಅದ್ಭುತ ನೈಸರ್ಗಿಕ ತಾಣವಾಗಿರುವ ಈ ಜಲಪಾತ ಪ್ರಕೃತಿ ಪ್ರಿಯರಿಗೆ ಇದೀಗ ಮಳೆಯ ಅಬ್ಬರದ ನಡುವೆ ತನ್ನತ್ತ ಸೆಳೆಯುತ್ತಿದೆ. ಯಲ್ಲಾಪುರದ ಸುತ್ತಮುತ್ತಲು ಹಾಗೂ ಹುಬ್ಬಳ್ಳಿ -ಧಾರವಾಡ ಭಾಗದಲ್ಲಿ ಮಳೆ ಸುರಿದ ಪರಿಣಾಮ ಬೇಡ್ತಿ(ಗಂಗಾವಳಿ ನದಿ) ನೀರಿನ ಹರಿವು ಹೆಚ್ಚಿಸಿಕೊಂಡು ಇದೀಗ ವೇಗ ಪಡೆದಿದ್ದು, ಮಾಗೋಡಿನಲ್ಲಿ ತನ್ನ ಸೌಂದರ್ಯ ವೃದ್ಧಿಸಿಕೊಂಡಿದೆ. ಇದನ್ನೂ ಓದಿ: ಸಂಪೂರ್ಣ ಭರ್ತಿ ಸನಿಹ ತಲುಪಿದ ಹಾರಂಗಿ ಜಲಾಶಯ – ಯಾವುದೇ ಕ್ಷಣದಲ್ಲಿ ನದಿಗೆ ನೀರು
