– 100% ಸರಿ ಇದ್ದೀನಿ ಅಂತ ಹೇಳಲ್ಲ, ಸಣ್ಣ ತಪ್ಪು ಮಾಡಿರಬಹುದು
– 2 ಕೋಟಿ ಕ್ಯಾಶ್ ನಮ್ಮದೇ ಎಂದ ಸಚಿವ
ಬೆಂಗಳೂರು: ನನ್ನ ದೃಷ್ಟಿಯಲ್ಲಿ ಇಡಿ ರೇಡ್ (ED Raid) ರಾಜಕೀಯ ಪ್ರೇರಿತ ಇರಬಹುದು. ನಾನೇ ಲಾಸ್ಟ್ ಅಂದುಕೊಂಡಿದ್ದೆ. ಆದ್ರೆ ನಾನೇ ಮೊದಲಿದ್ದೀನಿ. ಇನ್ನೂ ದೊಡ್ಡ ದೊಡ್ಡ ಮೀನುಗಳು ಇವೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ತಮ್ಮ ನಿವಾಸದ ಮೇಲಿನ ಇಡಿ ದಾಳಿ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡಿ ದಾಳಿಗೆ ಕಾರಣ ತಕ್ಷಣಕ್ಕೆ ಗೊತ್ತಿಲ್ಲ, ರಾಜಕೀಯ ಪ್ರೇರಿತ ಇರಬಹುದು. ಅವರಿಗೆ ಮಾಹಿತಿ ಇರಬಹುದು. ಆದ್ರೆ ನಮಗೆ ನೋಟಿಸ್ ಕೊಡಬಹುದಿತ್ತು. ನಮ್ಮ ದೃಷ್ಟಿಯಲ್ಲಿ ಬಹಳಷ್ಟು ಬೇರೆ ಬೇರೆ ಇದೆ. ದೊಡ್ಡ ದೊಡ್ಡ ಮೀನುಗಳಿವೆ, ಅದನ್ನ ಬಿಟ್ಟು ನಮ್ಮ ಕಡೆ ಬಂದಿದ್ದಾರೆ. ಇದು ನಮಗೂ ಆಶ್ಚರ್ಯ ಎಂದು ಹೇಳಿದ್ದಾರೆ.

2 ಕೋಟಿ ಕ್ಯಾಶ್ ನಮ್ಮದೇ
ಇಡಿ ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ಕೊಟ್ಟಿದ್ದೇನೆ. ಗೊತ್ತಿಲ್ಲದ್ದಕ್ಕೆ ಟೈಂ ಕೊಡಿ ಅಂದಿದ್ದೇನೆ. ಇದು ಇಡಿ ದಾಳಿಯಲ್ಲ, ಸರ್ಚ್ ಅಷ್ಟೇ. ಯಾವಾಗ ನೋಟಿಸ್ ಕೊಡ್ತಾರೋ ಆಗ ಉತ್ತರ ಕೊಡ್ತೀನಿ. ಅವರು ವಿದೇಶಿ ಹೂಡಿಕೆ ಮಾಡಿದ್ದೀರಾ ಅಂದ್ರು. ನಾವು ಮಾಡ್ತಾ ಇದ್ದೀವಿ, ಇನ್ನೂ ಮಾಡಿಲ್ಲ ಅಂತ ಹೇಳಿದ್ವಿ. ಇನ್ನೂ ಆರ್ಬಿಐನಿಂದ ಲೀಗಲ್ ಪರ್ಮಿಷನ್ ಪಡೆದಿಲ್ಲ. ನಾವಿನ್ನೂ ಫಾರಿನ್ನಲ್ಲಿ ಇನ್ವೆಸ್ಟ್ಮೆಂಟ್ ಮಾಡಿಲ್ಲ. ಅದರ ಬಗ್ಗೆ ಕಾರ್ಯಚಟುವಟಿಕೆ ನಡೀತಿದೆ. ಎರಡು ಕೋಟಿವರೆಗೂ ಕ್ಯಾಶ್ ಸಿಕ್ಕಿದೆ. ನಮ್ಮದೇ ಅಂತ ಹೇಳಿದ್ದೀವಿ, ಕ್ಲೈಮ್ ಮಾಡ್ತೀವಿ ಎಂದು ಹೇಳಿದ್ರು.
7-8 ಕಡೆ ರೇಡ್ ಮಾಡಿದ್ದಾರೆ. ಅವರಿಗೆ ಬೇಕಾದ ಮಾಹಿತಿ ಕೊಟ್ಟಿದ್ದೀವಿ. ನನ್ನ ಮಕ್ಕಳಿಗೂ ಕೂಡ ವಿಚಾರಣೆಗೆ ಸಹಕಾರ ಕೊಡಿ ಅಂತಾನೇ ಹೇಳಿದ್ದೀನಿ. ನೋಟಿಸ್ ಕೊಟ್ಟಿದ್ದರಲ್ಲಿ ಫೆಮಾ ಅಂತಾನೆ ಇದೆ. ಫೆಮಾ ಅಡಿ ರೇಡ್ ಮಾಡ್ತಿದ್ದೀವಿ. ಅಭಿಮಾನಿಗಳು ಪ್ರತಿಭಟನೆ ಮಾಡ್ತಿದ್ದಾರೆ, ಮಾಡಲಿ. ರಾಜಕೀಯವಾಗಿ ಈ ದಾಳಿ ನಡೆದಿರಬಹುದು. ನಾನು ಲಾಸ್ಟ್ ಅಂತ ಅಂದುಕೊಂಡಿದ್ದೆ. ನಾನೇ ಫಸ್ಟ್ ಆಗಿದ್ದೀನಿ. ನಾನು ಸಣ್ಣ ತಪ್ಪು ಮಾಡಿರಬಹುದು, ನೂರಕ್ಕೆ ನೂರು ಸರಿಯಿದ್ದೀವಿ ಅಂತ ಹೇಳ್ತಿಲ್ಲ. ಆದ್ರೆ ಬಿಜೆಪಿಯವರ ಮೇಲೆ ಈ ರೇಡ್ ಆಗಲ್ಲ. ಯಾವಾಗ ಮುಗಿಸ್ತಾರೆ ಅನ್ನೋ ಸಸ್ಪೆನ್ಸ್ ಇದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಶುಕ್ರವಾರ ಸಿಎಂ ಭೇಟಿಯಾಗ್ತೇನೆ
ನಮ್ಮ ಅಧ್ಯಕ್ಷರು ಇನ್ನು 8 ಜನ ಲಿಸ್ಟ್ನಲ್ಲಿದ್ದಾರೆ ಅಂತ ಹೇಳಿದ್ದಾರೆ. ತಕ್ಷಣ ಏನು ಹೇಳೋಕೆ ಬರೊಲ್ಲ. ಇಡೀ ದೇಶದ ತುಂಬಾ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷದವರನ್ನ ಟಾರ್ಗೆಟ್ ಮಾಡ್ತಿದ್ದಾರೆ. ಒಳ್ಳೆಯ ರೀತಿಯಲ್ಲಿ ತನಿಖೆ ಮಾಡ್ತಾರೆ ಅನ್ನೋ ಭರವಸೆ ಇದೆ. ಸಮಾಜದಲ್ಲಿ ನಾಗೇಂದ್ರ ಆಯ್ತು, ನಾನಾಯ್ತು. ಸಹಜವಾಗಿ ಸಮುದಾಯ ಟಾರ್ಗೆಟ್ ಆಗ್ತಿದ್ಯಾ ಅನ್ನೋ ಅನುಮಾನ ಕಾಡುತ್ತೆ. ಶುಕ್ರವಾರ ಬೆಳಗಾವಿಗೆ ಹೋಗ್ತೀನಿ. ಎಲ್ಲಾ ಕಡೆ ಸರ್ಚ್ ಮುಗಿದಿದೆ. ಸಾಧ್ಯವಾದ್ರೆ ನಾಳೆ ಸಿಎಂನ ಭೇಟಿಯಾಗ್ತೀನಿ ಎಂದು ಹೇಳಿದ್ದಾರೆ.

