ಚೆನ್ನೈ: ಸದಾ ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದಕ್ಕೆ ಗದರಿಸಿದ್ದರಿಂದ ಮಗ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು. ಇದನ್ನು ಕಂಡ ಕೆಲವೇ ನಿಮಿಷಗಳಲ್ಲಿ ಪಶ್ಚಾತ್ತಾಪದಿಂದ ತಂದೆ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಂದ್ರತೂರಿನಲ್ಲಿ (Kundrathur) ನಡೆದಿದೆ.
ಮೃತ ವ್ಯಕ್ತಿಯನ್ನು ಕುಂದ್ರತ್ತೂರಿನ ತಿರುವಳ್ಳುವರ್ ಪ್ರದೇಶದಲ್ಲಿ (Thiruvalluvar Street) ಬಡಗಿಯಾಗಿದ್ದ ಸುಂದರ್(40) ಎಂದು ಗುರುತಿಸಲಾಗಿದೆ. ಹತ್ತನೇ ತರಗತಿಯಲ್ಲಿ ಓದುತ್ತಿದ್ದ ತಮ್ಮ ಕಿರಿಯ ಮಗ ನವೀನ್ ಸದಾ ಮೊಬೈಲ್ ಫೋನ್ನಲ್ಲಿ ಗೇಮ್ ಆಡುತ್ತಿದ್ದರಿಂದ ಓದುವತ್ತ ಗಮನ ಹರಿಸುವಂತೆ ಗದರಿಸಿದ್ದರು. ಇದನ್ನೂ ಓದಿ: ನಾನ್ ಹೆಲ್ಮೆಟ್ ಹಾಕಿಲ್ಲ ಅಂದ್ರೆ ನಿನ್ಗೇನ್ ಕಷ್ಟ – ಬೈಕ್ ಸವಾರನಿಗೆ ಪೊಲೀಸ್ ಅವಾಜ್
ಇದರಿಂದ ಮನನೊಂದ ನವೀನ್ ಮನೆಯಲ್ಲಿ ಒಬ್ಬನೇ ಇದ್ದಾಗ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಂತರ ಮನೆಗೆ ಹಿಂತಿರುಗಿದ ಸುಂದರ್ಗೆ ನೆರೆಹೊರೆಯವರು ನವೀನ್ ಮೃತಪಟ್ಟಿರುವ ವಿಚಾರ ತಿಳಿಸಿದ್ದಾರೆ. ತಮ್ಮ ಮಗ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡಿರುವುದನ್ನು ಕಂಡು ಸುಂದರ್ ಆಘಾತಕ್ಕೊಳಗಾದರು. ನಂತರ ಅಡುಗೆ ಮನೆಗೆ ಹೋಗಿ ಸುಂದರ್ ಚಾಕುವಿನಿಂದ ಕತ್ತು ಮತ್ತು ಕೈಗಳನ್ನು ಕೊಯ್ದುಕೊಂಡಿದ್ದಾರೆ. ಕೊನೆಗೆ ಕೊಠಡಿಯೊಂದರ ಬಾಗಿಲಿಗೆ ಬೀಗ ಹಾಕಿಕೊಂಡು ನೇಣಿಗೆ ಶರಣಾಗಿದ್ದಾರೆ.
ಘಟನೆ ಕುರಿತಂತೆ ನೆರೆಹೊರೆಯವರು ಕುಂದ್ರತ್ತೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕ್ರೋಮ್ಪೇಟೆ ಸರ್ಕಾರಿ ಆಸ್ಪತ್ರೆಗೆ (Chromepet government hospital) ರವಾನಿಸಿದ್ದಾರೆ. ಇದೀಗ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಮೊಬೈಲ್ ವಿಚಾರಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಕೆಲವೇ ನಿಮಿಷಗಳಲ್ಲಿ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಅನಂತ್ ನಾಗ್ ಗೆ ಗೌರವ ಡಾಕ್ಟರೇಟ್ ಪ್ರದಾನ: ಕುಟುಂಬದ ಒತ್ತಾಯಕ್ಕೆ ಸ್ವೀಕರಿಸಿದೆ